ಬೆಂಗಳೂರು | ಬೈ ಎಲೆಕ್ಷನ್ ಹೊತ್ತಲ್ಲೇ ಮಾದರಿ ನೀತಿ ಸಂಹಿತೆ (MCC) ಉಲ್ಲಂಘನೆ, ಅಧಿಕಾರಿಗಳ ಅನಧಿಕೃತ ವರ್ಗಾವಣೆ ಪ್ರಯತ್ನ ಹಾಗೂ ಚುನಾವಣಾ ಪ್ರಕ್ರಿಯೆಯನ್ನು ಪ್ರಭಾವಿತಗೊಳಿಸುವ ಉದ್ದೇಶದ ಗಂಭೀರ ಆರೋಪದ ಕುರಿತು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.
ದೂರಿನಲ್ಲೇನಿದೆ?
ಕರ್ನಾಟಕ ರಾಜ್ಯದಲ್ಲಿ ಪ್ರಸ್ತುತ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಈ ಅವಧಿಯಲ್ಲಿ ಆಡಳಿತಾತ್ಮಕ ತಟಸ್ಥತೆ, ಸಮಾನ ಅವಕಾಶ ಮತ್ತು ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆಯನ್ನು ಕಾಪಾಡುವುದು ಅತ್ಯಂತ ಅಗತ್ಯವಾಗಿದ್ದು, ಚುನಾವಣಾ ಆಯೋಗದ ಮಾರ್ಗಸೂಚಿಗಳ ಪ್ರಕಾರ ಯಾವುದೇ ರೀತಿಯ ಅಧಿಕಾರಿಗಳ ವರ್ಗಾವಣೆ, ನೇಮಕಾತಿ ಅಥವಾ ಹುದ್ದೆ ಬದಲಾವಣೆಗಳನ್ನು ಆಯೋಗದ ಪೂರ್ವಾನುಮತಿ ಇಲ್ಲದೆ ಕೈಗೊಳ್ಳುವುದು ಕಟ್ಟುನಿಟ್ಟಾಗಿ ನಿಷೇಧಿತವಾಗಿದೆ.
ಈ ಸ್ಪಷ್ಟ ನಿಯಮಗಳಿದ್ದರೂ, ವಿಶ್ವಾಸಾರ್ಹ ಮಾಹಿತಿಯ ಆಧಾರದ ಮೇಲೆ, ಬಾಗಲಕೋಟೆ ಜಿಲ್ಲೆಯ ಉಸ್ತುವಾರಿ ಸಚಿವ, ಹಾಗೂ ಅಬಕಾರಿ ಸಚಿವರೂ ಆಗಿರುವ ತಿಮ್ಮಾಪುರ್ ಅವರು ಬೆಂಗಳೂರು ನಗರ, ಮೈಸೂರು ಮತ್ತು ತುಮಕೂರು ಜಿಲ್ಲೆಗಳ ಅಬಕಾರಿ ಉಪ ಆಯುಕ್ತರು ಸೇರಿದಂತೆ ಪ್ರಮುಖ ಹುದ್ದೆಗಳ ವರ್ಗಾವಣೆ ಪ್ರಯತ್ನ ಮಾಡುತ್ತಿರುವುದು ತಿಳಿದುಬಂದಿದೆ.

ವಿಶೇಷವಾಗಿ, ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲೇ ಉಪಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ, ಆ ಕ್ಷೇತ್ರದೊಂದಿಗೆ ನೇರ ಸಂಬಂಧ ಹೊಂದಿರುವ ಸಚಿವರು ಇಂತಹ ಆಡಳಿತಾತ್ಮಕ ಕ್ರಮಗಳನ್ನು ಪ್ರಭಾವಿಸಲು ಪ್ರಯತ್ನಿಸುವುದು ಚುನಾವಣಾ ಪ್ರಕ್ರಿಯೆಯ ನಿಷ್ಪಕ್ಷಪಾತತೆಯ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯನ್ನು ಉಂಟುಮಾಡುತ್ತದೆ.

ಇದಲ್ಲದೆ, ಈ ವರ್ಗಾವಣೆಗಳಿಗೆ ಸಂಬಂಧಿಸಿದ ಹುದ್ದೆಗಳ ಮೇಲೆ ಅಸಾಮಾನ್ಯ ಬೇಡಿಕೆ ಉಂಟಾಗಿರುವುದು ಹಾಗೂ ಈ ಕ್ರಮಗಳು ಸಾಮಾನ್ಯ ಆಡಳಿತಾತ್ಮಕ ಅವಶ್ಯಕತೆಗಳಿಗಿಂತ ವಿಭಿನ್ನವಾಗಿ, ಚುನಾವಣಾ ಅವಧಿಯಲ್ಲಿ ನಂಪನ್ಮೂಲ ಸಂಗ್ರಹಣೆ ಅಥವಾ ಅಕ್ರಮ ಆರ್ಥಿಕ ಲಾಭಗಳ ಸಾಧನೆಗಾಗಿ ಪ್ರೇರಿತವಾಗಿರಬಹುದೆಂಬ ಗಂಭೀರ ಅನುಮಾನಗಳು ವ್ಯಕ್ತವಾಗುತ್ತಿವೆ. ಇಂತಹ ಪ್ರಕ್ರಿಯೆಗಳು ಮತದಾರರ ವಿಶ್ವಾಸಕ್ಕೆ ಧಕ್ಕೆ ಉಂಟುಮಾಡುವಷ್ಟೇ ಅಲ್ಲದೆ, ಚುನಾವಣಾ ವ್ಯವಸ್ಥೆಯ ಸ್ವಚ್ಛತೆ ಮತ್ತು ಸಮಾನ ಸ್ಪರ್ಧಾತ್ಮಕ ಪರಿಸರವನ್ನು ದುರ್ಬಲಗೊಳಿಸುತ್ತವೆ.
ಈ ಹಿನ್ನೆಲೆ, ತಕ್ಷಣದ ಪ್ರಾಥಮಿಕ ತನಿಖೆ ಪ್ರಾರಂಭಿಸಬೇಕು. ಸಂಬಂಧಿತ ಸಚಿವರು ಹಾಗೂ ಅಧಿಕಾರಿಗಳ ಪಾತ್ರವನ್ನು ಪರಿಶೀಲಿಸಿ, MCC ಉಲ್ಲಂಘನೆಯಿರುವುದೇ ಎಂಬುದರ ಬಗ್ಗೆ ವಿವರವಾದ ವರದಿ ಪಡೆಯಬೇಕು. ಯಾವುದೇ ರೀತಿಯ ಅನಧಿಕೃತ ವರ್ಗಾವಣೆ ಪ್ರಕ್ರಿಯೆಗಳು ನಡೆಯುತ್ತಿದ್ದರೆ, ತಕ್ಷಣವೇ ನಿಲ್ಲಿಸಲು ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕು. ಚುನಾವಣಾ ಪ್ರಕ್ರಿಯೆಯನ್ನು ಪ್ರಭಾವಿತಗೊಳಿಸುವ ಉದ್ದೇಶದಿಂದ ಹುದ್ದೆಗಳ ದುರುಪಯೋಗ ಅಥವಾ ಸಂಪನ್ಮೂಲ ಸಂಗ್ರಹಣೆ ನಡೆದಿರುವುದು ದೃಢಪಟ್ಟಲ್ಲಿ, ಸಂಬಂಧಿತರ ವಿರುದ್ಧ Representation of the People Act, 1951 ಹಾಗೂ ಅನ್ವಯಿಸುವ ಇತರ ದಂಡಾತ್ಮಕ ಕಾನೂನುಗಳಡಿ ಕ್ರಮ ಕೈಗೊಳ್ಳಬೇಕು. ಕಟ್ಟುನಿಟ್ಟಿನ ಮೇಲ್ವಿಚಾರಣೆ ಮತ್ತು ನಿಯಂತ್ರಣ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೈಟೆಕ್ ಕ್ರಾಂತಿ.. ರಸ್ತೆ ಗುಂಡಿ ಪತ್ತೆಗೆ AI ಡ್ಯಾಶ್ಕ್ಯಾಮ್ ನಿಯೋಜಿಸಿದ NHAI


















