ಬೆಂಗಳೂರು : ಆಸ್ತಿಗಾಗಿ ಸಾಕು ಮಗನನ್ನೇ ಕಿಡ್ನಾಪ್ ಮಾಡಿರುವ ಆರೋಪ ಕೇಳಿಬಂದಿರುವ ಘಟನೆ ಆತಂಕ ಮೂಡಿಸಿದೆ. ತಾಯಿ ಮತ್ತು ತಂಗಿ ಸೇರಿ ಅಪಹರಿಸಿ ಬಚ್ಚಿಟ್ಟಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಈ ಸಂಬಂಧ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಮುನಿರಾಜು ಎಂಬಾತ ಕಳೆದ ನಾಲ್ಕು ತಿಂಗಳಿನಿಂದ ನಾಪತ್ತೆಯಾಗಿದ್ದಾನೆ. ಪತ್ನಿ ಮಂಜುಳ ಸ್ಥಳೀಯ ಠಾಣೆಗೆ ದೂರು ನೀಡಿದ್ದರೂ, ನಾಲ್ಕು ತಿಂಗಳ ಹಿಂದೆ ನೀಡಿದ್ದ ದೂರನ್ನು ಕಳೆದ ತಿಂಗಳ 7ನೇ ತಾರೀಖು ಎಫ್ಐಆರ್ ಆಗಿ ದಾಖಲಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.
ಮುನಿರಾಜು ಹಾಗೂ ಮಂಜುಳ ಇಬ್ಬರೂ ಟೈಲರ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಆದರೆ ಪತಿ ಕಾಣೆಯಾಗಿರುವುದರಿಂದ ಮಂಜುಳ ಆತಂಕದಲ್ಲಿ ದಿನ ಕಳೆಯುತ್ತಿದ್ದಾರೆ. ಎಷ್ಟೇ ಹುಡುಕಾಟ ನಡೆಸಿದರೂ ಪತಿ ಪತ್ತೆಯಾಗಿಲ್ಲ ಎಂದು ಕಣ್ಣೀರು ಹಾಕುತ್ತಿದ್ದಾರೆ.
ಹಲವು ವರ್ಷಗಳ ಹಿಂದೆಯೂ ಇದೇ ರೀತಿ ಮುನಿರಾಜು ನಾಪತ್ತೆಯಾಗಿದ್ದನು. ಸುಮಾರು ಎರಡು ತಿಂಗಳ ಬಳಿಕ ಮನೆಗೆ ಮರಳಿದ್ದ ಮುನಿರಾಜು, ತಾಯಿ ಮತ್ತು ತಂಗಿ ಕಿಡ್ನಾಪ್ ಮಾಡಿ ತಮಿಳುನಾಡಿನಲ್ಲಿ ಬಚ್ಚಿಟ್ಟಿದ್ದರು ಎಂದು ಪತ್ನಿಗೆ ತಿಳಿಸಿದ್ದಾನೆ ಎನ್ನಲಾಗಿದೆ.
ಈಗ ಮತ್ತೆ ಮುನಿರಾಜು ಕಾಣೆಯಾಗಿರುವ ಹಿನ್ನೆಲೆಯಲ್ಲಿ, ನಾದಿನಿ ಹಾಗೂ ಅತ್ತೆಯ ಮೇಲೆಯೇ ಮಂಜುಳ ಅನುಮಾನ ವ್ಯಕ್ತಪಡಿಸಿದ್ದಾರೆ. ತನ್ನ ತಂದೆ ಗಂಡನ ಹೆಸರಿನಲ್ಲಿ ಒಂದು ಮನೆ ಬರೆದು ಕೊಟ್ಟಿದ್ದು, ಆಸ್ತಿಗಾಗಿ ಗಂಡನಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಅತ್ತೆ ಹಾಗೂ ನಾದಿನಿಯ ವಿರುದ್ಧ ವಿಚಾರಣೆ ನಡೆಸುವಂತೆ ಮನವಿ ಮಾಡಿದರೂ ಪೊಲೀಸರು ಸ್ಪಂದಿಸಿಲ್ಲ ಎಂದು ಮಂಜುಳ ದೂರಿದ್ದಾರೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.
ಇದನ್ನೂ ಓದಿ : ಪ್ರಿಯಕರನ ಸಾಲ ತೀರಿಸೋಕೆ ಕಳ್ಳಿಯಾದ ಆಂಟಿ | 3.4 ಲಕ್ಷದ 35 ಗ್ರಾಂ ಚಿನ್ನಾಭರಣ ವಶ



















