ಮೈಸೂರು: ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಲ್ಲಿ ಭ್ರಷ್ಟಾಚಾರ ನಡೆದಿರುವ ಆರೋಪವೊಂದು ಕೇಳಿ ಬಂದಿದೆ.
ವಿಶ್ವವಿದ್ಯಾಲಯದ ಅಭಿವೃದ್ಧಿ ಹೆಸರಿನಲ್ಲಿ ಕೋಟಿ ಕೋಟಿ ರೂಪಾಯಿ ಭ್ರಷ್ಟಾಚಾರ ನಡೆಸಲಾಗಿದೆ ಎನ್ನಲಾಗುತ್ತಿದೆ. ಈ ಕುರಿತು ಕಾನೂನು ವಿದ್ಯಾರ್ಥಿ ಪುಟ್ಟಸ್ವಾಮಿಗೌಡ ಗಂಭೀರ ಆರೋಪ ಮಾಡಿದ್ದಾರೆ. ವಿವಿಯ ಕುಲಪತಿ ಪ್ರೊ, ಶರಣಪ್ಪ ವಿ ಹಲಸೆ ಸೇರಿದಂತೆ ವಿಶ್ವವಿದ್ಯಾನಿಲಯದ ಸಿಬ್ಬಂದಿ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ.
ಬಟ್ಟೆ ಬ್ಯಾಗ್, ಕಂಪ್ಯೂಟರ್ ಖರೀದಿ, ವರ್ಚುವಲ್ ಫೋಟೋ ಶೂಟ್, ಕಿಟಕಿ ಬಾಗಿಲು ಬದಲಾವಣೆ, ಕಂಪ್ಯೂಟರ್ ಖರೀದಿ ಸೇರಿದಂತೆ ಹಲವು ವಸ್ತುಗಳ ಖರೀದಿಯಲ್ಲೂ ಹಣ ಹೊಡೆಯಲಾಗಿದೆ ಎಂದು ಆರೋಪಿಸಿದ್ದಾರೆ. ಕೆಎಸ್ಓಯು ಕಟ್ಟಡದ ವರ್ಚುವಲ್ ಟೂರ್ಗೆ 360° ಫೋಟೋಗ್ರಾಫಿ ಮಾಡಲು 96,91,812 ರೂ. ಖರ್ಚು ಮಾಡಲಾಗಿದೆ. ಕೇವಲ ನಾಲ್ಕೈದು ನಿಮಿಷದಲ್ಲಿ ಮುಗಿಯುವ ಕೆಲಸಕ್ಕೆ ಇಷ್ಟೊಂದು ಹಣ ಖರ್ಚು ತೋರಿಸಲಾಗಿದೆ ಎಂದು ಆರೋಪಿಸಿದ್ದಾರೆ.
11 ಕಟ್ಟಡಗಳ ಫೋಟೋಗ್ರಾಫಿಗೆ ತಲಾ 4 ರಿಂದ 5 ಲಕ್ಷ ರೂ. ಖರ್ಚು ಮಾಡಿರುವ ಕುರಿತು ತೋರಿಸಲಾಗಿದೆ. ಎಲ್ಇಡಿ ಬಲ್ಬ್ ಹಾಕಿಸಲು ಬರೋಬ್ಬರಿ 2 ಕೋಟಿ ರೂ. ಬಿಲ್ ಮಾಡಲಾಗಿದೆ. ಅತಿಥಿ ಗೃಹದ ಹಾಸಿಗೆ ದಿಂಬಿಗೆ 15 ಲಕ್ಷ ರೂ ಬಿಲ್. ಪುಸ್ತಕ ತುಂಬಿಕೊಂಡು ಹೋಗುವ ಬ್ಯಾಗ್ ಗೆ 60 ಲಕ್ಷ ರೂ ಬಿಲ್. ಒಂದು ಬ್ಯಾಗ್ 120 ರೂಪಾಯಿಯಂತೆ ಖರೀದಿ ಎಂದು ತೋರಿಸಲಾಗಿದೆ. . ಈ ಬ್ಯಾಗ್ಗಳಿಗೆ ಮಾರುಕಟ್ಟೆಯಲ್ಲಿ 20 ರಿಂದ 30 ರೂಪಾಯಿ ಮೌಲ್ಯ ಇದೆ ಸೇರಿದಂತೆ ಹಲವು ವಿಷಯಗಳ ಕುರಿತು ಆರೋಪ ಮಾಡಿದ್ದಾರೆ. ಒಂದು ವೇಳೆ ಈ ಆರೋಪವನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರ ತನಿಖೆ ನಡೆಸಿದರೆ, ಸತ್ಯ ಹೊರ ಬೀಳಲಿದೆ.