ಬೆಂಗಳೂರು: ಜಮ್ಮು-ಕಾಶ್ಮೀರದ ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಪಾಕಿಸ್ತಾನದ ಮೇಲೆ ಭಾರತ ಕೈಗೊಂಡ “ಆಪರೇಷನ್ ಸಿಂಧೂರ”ದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ಅಲಿ ಖಾನ್ ಮೊಹ್ಮದಾಬಾದ್ ಎಂಬ ಸಹಾಯಕ ಪ್ರಾಧ್ಯಾಪಕರೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಹರಿಯಾಣದ ಅಶೋಕ ವಿಶ್ವವಿದ್ಯಾಲಯದಲ್ಲಿ ಅಸಿಸ್ಟಂಟ್ ಪ್ರೊಫೆಸರ್ ಆಗಿರುವ ಅಲಿ ಖಾನ್ ಮೊಹ್ಮದಾಬಾದ್ ಎಂಬುವರನ್ನು ದೆಹಲಿಯಲ್ಲಿ ಬಂಧಿಸಲಾಗಿದೆ.
ಬಿಜೆಪಿ ಯುವ ಮೋರ್ಚಾ ನಾಯಕ ಯೋಗೇಶ್ ಜಥೇರಿ, ಜಥೇರಿ ಗ್ರಾಮದ ಸರ್ಪಂಚ್, ಹರಿಯಾಣ ಮಹಿಳಾ ಆಯೋಗದ ಮುಖ್ಯಸ್ಥೆ ರೇಣು ಭಾಟಿಯಾ ನೀಡಿದ ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆಪರೇಷನ್ ಸಿಂಧೂರದ ಬಗ್ಗೆ ಅಲಿ ಖಾನ್ ಮೊಹ್ಮದಾಬಾದ್ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದರು. ಇದಾದ ಬಳಿಕ ಭಾರಿ ವಿವಾದ ಉಂಟಾಗಿತ್ತು.
ಕರ್ನಲ್ ಸೋಫಿಯಾ ಖುರೇಷಿ ಹಾಗೂ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರು ಆಪರೇಷನ್ ಸಿಂಧೂರದ ಬಗ್ಗೆ ಸುದ್ದಿಗೋಷ್ಠಿ ನಡೆಸಿ ವಿವರಣೆ ನೀಡಿದ್ದರು. ಇದರ ಬಗ್ಗೆ ಅಲಿ ಖಾನ್ ಮೊಹ್ಮದಾಬಾದ್ ಆಕ್ಷೇಪ ವ್ಯಕ್ತಪಡಿಸಿದ್ದರು. “ಬಲಪಂಥೀಯರು ಸೋಫಿಯಾ ಖುರೇಷಿ ಹಾಗೂ ವ್ಯೋಮಿಕಾ ಸಿಂಗ್ ಅವರು ಆಪರೇಷನ್ ಸಿಂಧೂರದ ಬಗ್ಗೆ ವಿವರಣೆ ನೀಡುತ್ತಿರುವುದಕ್ಕೆ ಖುಷಿ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಇದು ಬೂಟಾಟಿಕೆಯಾಗಿದೆ” ಎಂದು ಪೋಸ್ಟ್ ಮಾಡಿದ್ದರು.
“ಸೇನೆಯ ಇಬ್ಬರು ಮಹಿಳಾ ಅಧಿಕಾರಿಗಳು ಸುದ್ದಿಗೋಷ್ಠಿ ನಡೆಸುವುದು ಕುತಂತ್ರದ ಭಾಗವಾಗಿದೆ. ಈ ಇಬ್ಬರು ಮಹಿಳಾ ಅಧಿಕಾರಿಗಳು ಗುಂಪು ಹತ್ಯೆ, ಬಿಜೆಪಿಯ ದ್ವೇಷ ಬಿತ್ತುವ ಮನೋಭಾವದ ಕುರಿತು ಕೂಡ ಮಾತನಾಡಿದರೆ ಮಾತ್ರ ಸಮಾನತೆಯಾಗುತ್ತದೆ. ಇಲ್ಲದಿದ್ದರೆ ಇದು ಷಡ್ಯಂತ್ರದ ಭಾಗವಾಗಿದೆ” ಎಂದೆಲ್ಲ ಪೋಸ್ಟ್ ಮಾಡಿದ್ದರು. ಹಾಗಾಗಿ, ಅಲಿ ಖಾನ್ ಮೊಹ್ಮದಾಬಾದ್ ವಿರುದ್ಧ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿತ್ತು.