ಬೆಂಗಳೂರು: ವಂಚಕಿ ಐಶ್ವರ್ಯ ಗೌಡ ವಿರುದ್ಧ ಇಡಿ ಅಸಲಿ ಆಟ ಆರಂಭಿಸಿದೆ.
ಐಶ್ವರ್ಯಗೌಡ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದರೂ ಕೂಲ್ ಆಗಿಯೇ ಇದ್ದರು. ಈಗ ಇಡಿ ಶಾಕ್ ಕೊಟ್ಟಿದೆ. ಐಶ್ವರ್ಯ ಗೌಡ ವಿರುದ್ಧ 9 ಪ್ರಕರಣಗಳು ದಾಖಲಾಗಿವೆ. ಬೆಂಗಳೂರಿನ ಹಲವು ಪೊಲೀಸ್ ಠಾಣೆಯಲ್ಲಿ 9 ವಂಚನೆ ಕೇಸ್ ಗಳು ದಾಖಲಾಗಿವೆ. ಆದರೂ ಐಶ್ವರ್ಯ ಗೌಡ ನೆಮ್ಮದಿಯಾಗಿಯೇ ಇದ್ದರು.
ಈ ಹಿಂದೆ ಚಂದ್ರ ಲೇಔಟ್ ಠಾಣೆಯಲ್ಲಿ ಐಶ್ವರ್ಯ ವಿರುದ್ದ ವಂಚನೆ ಕೇಸ್ ದಾಖಲಾಗಿತ್ತು. ಕೆಂಗೇರಿ ಗೇಟ್ ಎಸಿಪಿ ಭರತ್ ರೆಡ್ಡಿ ತನಿಖೆ ನಡೆಸಿದ್ದರು. ತನಿಖೆ ವೇಳೆ 75 ಕೋಟಿ ರೂ. ಗೂ ಅಧಿಕ ಟ್ರಾನ್ಸ್ ಆಕ್ಷನ್ ನಡೆದಿರುವುದ ಪತ್ತೆಯಾಗಿತ್ತು. ಹೀಗಾಗಿ ಐಟಿ ಹಾಗೂ ಇಡಿಗೆ ಪತ್ರ ಬರೆದಿದ್ದರು. ಮಾಹಿತಿ ಮೇರೆಗೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಹಲವು ದಿನಗಳ ಕಾಲ ಐಶ್ವರ್ಯ ಗೌಡ, ಶಿಲ್ಪ ಗೌಡ ಹಾಗೂ ಶಾಸಕ ವಿನಯ್ ಕುಲಕರ್ಣಿ ಮಾಹಿತಿಯನ್ನು ಇಡಿ ಕೆದಕಿತ್ತು. ದಾಳಿಗೂ ಮುಂಚಿತವಾಗಿಯೇ ಇಡಿ ಇಂಚಿಂಚೂ ಮಾಹಿತಿ ಪಡೆದಿತ್ತು. ಐಶ್ವರ್ಯ ಗೌಡ ಹಿನ್ನಲೆ, ಅಕೌಂಟ್ ಡೀಟೈಲ್ಸ್, ಹಣದ ವ್ಯವಹಾರದ ಬಗ್ಗೆ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ಆನಂತರ ಅಧಿಕಾರಿಗಳು ದಾಳಿ ನಡೆಸಿದ್ದರು.
ದಾಳಿ ವೇಳೆ ಹಲವು ಗಂಟೆಗಳ ಕಾಲ ಮನೆಯನ್ನು ಸಂಪೂರ್ಣವಾಗಿ ಸರ್ಚ್ ಮಾಡಿದ್ದಾರೆ. ಸಿಕ್ಕ ಕೆಲವು ದಾಖಲೆಗಳನ್ನು ಹಾಗೂ ಕಡತಗಳನ್ನು ಮುಂದಿಟ್ಟು ವಿಚಾರಣೆ ನಡೆಸಿದ್ದಾರೆ. ಆದರೆ, ಐಶ್ವರ್ಯ ಗೌಡ ಯಾವುದೇ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿಲ್ಲ ಎನ್ನಲಾಗಿದೆ. ಹೀಗಾಗಿ ಅರೆಸ್ಟ್ ಮಾಡಲಾಗಿದ್ದು, ನ್ಯಾಯಾಧೀಶರು 14 ದಿನಗಳ ಕಾಲ ಇಡಿ ಕಸ್ಟಡಿಗೆ ನೀಡಿ ಆದೇಶ ನೀಡಿದ್ದಾರೆ.
ಹೀಗಾಗಿ ಇಡಿ ಅಧಿಕಾರಿಗಳು ಅಸಲಿ ಆಟ ಆರಂಭಿಸಿದ್ದಾರೆ. ಈ ಹಿಂದೆ ವ್ಯವಹಾರ ನಡೆಸಿದ್ದ ಹೋಟೆಲ್, ಮನೆ, ಗೋಲ್ಡ್ ಶಾಪ್ ಗಳಲ್ಲಿ ಸ್ಥಳ ಮಹಜರು ನಡೆಸಲು ಸಿದ್ಧತೆ ನಡೆಸಿದ್ದಾರೆ. ಐಶ್ವರ್ಯ ಗೌಡಳನ್ನು ಸ್ಥಳಕ್ಕೆ ಕರೆದೊಯ್ದು ಅಧಿಕಾರಿಗಳು ಮಹಜರು ನಡೆಸುವ ಸಾಧ್ಯತೆ ಇದೆ. ತನಿಖೆ ವೇಳೆ ಬೇರೆಯವರ ಕೈವಾಡವಿರುವ ಸಂಶಯ ವ್ಯಕ್ತವಾದರೆ, ಅವರಿಗೂ ನೋಟಿಸ್ ನೀಡುವ ಸಾಧ್ಯತೆ ಇದೆ.