ಬೆಂಗಳೂರು : ಜಾಗತಿಕ ಯುದ್ಧದ ಪರಿಣಾಮ ಈಗ ಮಸಾಲೆ ಹಾಗೂ ದಿನಸಿ ವ್ಯಾಪಾರಿಗಳ ಮೇಲೂ ಬೀರುತ್ತಿದೆ. ಕಳೆದ ಎರಡು ವಾರಗಳಿಂದ ಮಸಾಲೆ ಪದಾರ್ಥಗಳು ಹಾಗೂ ದಿನಸಿ ವಸ್ತುಗಳ ವಹಿವಾಟು ಶೇ.50ರಷ್ಟು ಕುಸಿತ ಕಂಡಿದ್ದು, ವ್ಯಾಪಾರಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಹೋಟೆಲ್ ಮತ್ತು ಕ್ಯಾಟರಿಂಗ್ ವಲಯದಲ್ಲಿನ ಮಂದಗತಿಯಿಂದ ಈ ಪರಿಣಾಮ ನೇರವಾಗಿ ಮಸಾಲೆ ವ್ಯಾಪಾರಕ್ಕೂ ತಟ್ಟಿದೆ. ಸಾಮಾನ್ಯವಾಗಿ ಮದುವೆ ಸೀಸನ್ ವೇಳೆ ವ್ಯಾಪಾರ ಚುರುಕಾಗಿರಬೇಕಾದರೂ, ಈ ಬಾರಿ ವ್ಯಾಪಾರ ‘ಪೂಲ್ ಡಲ್’ ಆಗಿದೆ.
ಅರಿಶಿನ, ಜೀರಿಗೆ, ಸಾಸಿವೆ, ಕರಿಮೆಣಸು, ಏಲಕ್ಕಿ, ಲವಂಗ, ದಾಲ್ಚಿನ್ನಿ, ಕೊತ್ತಂಬರಿ ಬೀಜ ಹಾಗೂ ಒಣ ಮೆಣಸಿನಕಾಯಿ ಸೇರಿದಂತೆ ಪ್ರಮುಖ ಮಸಾಲೆ ಪದಾರ್ಥಗಳ ಖರೀದಿ ಗಣನೀಯವಾಗಿ ಇಳಿಕೆಯಾಗಿದೆ. ಹೋಟೆಲ್ ಮತ್ತು ಕ್ಯಾಟರಿಂಗ್ ಕಾರ್ಯಕ್ರಮಗಳು ಕಡಿಮೆಯಾಗಿರುವುದರಿಂದ ಹೋಲ್ಸೇಲ್ ಮಸಾಲೆ ವ್ಯವಹಾರ ಬಹುತೇಕ ಸ್ಥಗಿತಗೊಂಡಿದೆ.
ಇದರ ಜೊತೆಗೆ ಕಮರ್ಷಿಯಲ್ LPG ಕೊರತೆಯೂ ಹೋಟೆಲ್ ಉದ್ಯಮಕ್ಕೆ ಹೊಡೆತ ನೀಡಿದ್ದು, ಅದರ ಪರಿಣಾಮವಾಗಿ ದಿನಸಿ ವಸ್ತುಗಳ ಖರೀದಿ ಸಹ ಕುಸಿತ ಕಂಡಿದೆ. ಹೋಟೆಲ್ ಹಾಗೂ ಕ್ಯಾಟರಿಂಗ್ ಚೆನ್ನಾಗಿ ನಡೆದರೆ ನಮಗೂ ವ್ಯವಹಾರ ಇರುತ್ತದೆ. ಈಗ ಅವರು ಕುಸಿದರೆ ನಾವು ಕೂಡ ಸಂಕಷ್ಟಕ್ಕೆ ಸಿಲುಕುತ್ತೇವೆ ಎಂದು ವ್ಯಾಪಾರಿಗಳು ಅಳಲು ವ್ಯಕ್ತಪಡಿಸಿದ್ದಾರೆ.
ಸ್ಟಾಕ್ ಜಾಸ್ತಿಯಾಗಿ ಉಳಿಯುತ್ತಿರುವುದರಿಂದ ವ್ಯಾಪಾರಿಗಳು ನಷ್ಟದ ಭೀತಿ ಎದುರಿಸುತ್ತಿದ್ದಾರೆ. “ಮದುವೆ ಸೀಸನ್ನಲ್ಲೇ ಇಂತಹ ಕುಸಿತ ಎಂದಿಗೂ ನೋಡಿಲ್ಲ. ಯಾರೂ ಖರೀದಿ ಮಾಡುತ್ತಿಲ್ಲ” ಎಂದು ಮಾಲೀಕರು ಬೇಸರ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ, ಯುದ್ಧದ ಪರಿಣಾಮ ಹೋಟೆಲ್ ವಲಯದಿಂದ ಆರಂಭವಾಗಿ ಈಗ ಮಸಾಲೆ ಮತ್ತು ದಿನಸಿ ವ್ಯಾಪಾರಿಗಳಿಗೂ ವ್ಯಾಪಕ ಸಂಕಷ್ಟವನ್ನು ತಂದಿದ್ದು, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಹೇಗಿರಲಿದೆ ಎಂಬುದು ಆತಂಕಕಾರಿಯಾಗಿದೆ.
ಇದನ್ನೂ ಓದಿ : ಇಂದಿನಿಂದ ನೀರಿನ ದರ ಶೇ.3ರಷ್ಟು ಹೆಚ್ಚಳ


















