ದುಬೈ ಕೇರಳ ಸಂಘದ ಆ ಕಾರ್ಯಕ್ರಮ ಈಗ ದೇಶದೆಲ್ಲೆಡೆ ವ್ಯಾಪಕ ಟೀಕೆಗೆ ಗುರಿಯಾಗಿದೆ.
ದುಬೈ ಕೇರಳ ಸಂಘ ಈ ಬಾರಿ ತನ್ನ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಪಾಕಿಸ್ತಾನಿ ಕ್ರಿಕೆಟಿಗ ಶಾಹೀದ್ ಅಪ್ರಿದಿಯನ್ನು ಆಹ್ವಾನಿಸಿತ್ತು. ಹೀಗಾಗಿ ಕಾರ್ಯಕ್ರಮಕ್ಕೆ ಬಂದ ಪಾಕ್ ಕ್ರಿಕೆಟರ್ ಗೆ ದುಬೈ ಕೇರಳ ಸಂಘದ ಸದಸ್ಯರು ಕೆಂಪು ಹಾಸಿನ ಸ್ವಾಗತ ನೀಡಿ ಸತ್ಕರಿಸಿದ್ದಾರೆ. ಈ ಘಟನೆ ಸಮಸ್ತ ಭಾರತೀಯರನ್ನು ಕೆರಳುವಂತೆ ಮಾಡಿದೆ. ಇತ್ತೀಚೆಗಷ್ಟೇ ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತ ಆಪರೇಷನ್ ಸಿಂಧೂರ ಸಮರ ಸಾರಿತ್ತು. ಇದಕ್ಕೆ ಕೆಂಡ ಕಾರಿದ್ದ ಅಫ್ರಿದಿ, ಉಗ್ರರು ಭಾರತದೊಳಗೆ ನುಸುಳವಾಗ ಯೋಧರೇನು ಮಾಡುತ್ತಿದ್ದರು? ಭಯೋತ್ಪಾದಕರೇನು ಪಾಕಿಸ್ತಾನಿಗಳಾ? ಅಂತಾ ಕ್ಯಾತೆ ತೆಗೆದಿದ್ದ. ಇಂಥಾ ವ್ಯಕ್ತಿಯನ್ನು ಕೇರಳ ಸಂಘ ಸ್ವಾಗತಿಸಿ, ಸನ್ಮಾನಿಸಿದ ಪರಿ ಈಗ ವ್ಯಾಪಕ ಟೀಕೆಗೆ ಗುರಿಯಾಗಿದೆ.
ಭಾರತ ವಿರೋಧಿ ಮನಸ್ಥಿತಿಯ ವ್ಯಕ್ತಿಯನ್ನು ಆಹ್ವಾನಿಸುವ ಅಗತ್ಯವಿತ್ತಾ? ಎನ್ನುವ ಅನ್ನೋ ಪ್ರಶ್ನೆ ಕೂಡ ಮೂಡಿದೆ. ಏಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಮ್ ನಲ್ಲಿ 26 ಪ್ರವಾಸಿಗರನ್ನು ಧರ್ಮ ಕೇಳಿ ಹತ್ಯೆ ಮಾಡಲಾಗಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಭಾರತವು ಪಾಕ್ ನೊಳಗೆ ನುಗ್ಗಿ ದಾಳಿ ಮಾಡಿತ್ತು. ಇದರ ಬೆನ್ನಲ್ಲೇ ವಾಘಾ-ಅಟ್ಟಾರಿ ಗಡಿಗೆ ಆಗಮಿಸಿದ್ದ ಅಫ್ರಿದಿ ಪಾಕ್ ಯೋಧರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದ. ಅಲ್ಲದೆ ಪಾಕ್ ಸಿಖ್ ಸಮುದಾಯದ ಮುಖಂಡರೊಟ್ಟಿಗೆ ಸಮಾಲೋಚನೆ ನಡೆಸಿದ್ದ ಅಫ್ರಿದಿ, ಭಾರತದ ಸಿಖ್ಖರ ಪವಿತ್ರ ಭೂಮಿ ಪಾಕಿಸ್ತಾನ. ಹೀಗಾಗಿ ಅವರೆಲ್ಲಾ ಪಾಕ್ ಸೇನೆಯನ್ನು ಬೆಂಬಲಿಸಬೇಕು ಅಂತಾ ನಾಲಗೆ ಹರಿಬಿಟ್ಟಿದ್ದ.