ಬೆಂಗಳೂರು: ಇಷ್ಟಕಾಮ್ಯ ಕೇಶವ ಪ್ರೊಡಕ್ಷನ್ಸ್ ಮತ್ತು ಸಿನಿಮ್ಯಾಟಿಕ್ಸ್ ಬ್ಯಾನರಿನ ಅಡಿಯಲ್ಲಿ ಆದರ್ಶ್ ಅಯ್ಯಂಗಾರ್ ಅವರು ನಿರ್ಮಿಸಿ ಅವರೆ ಹಾಡಿರುವ ’ಪದವೇ’ ಎಂಬ ಹಾಡು ’ಆದರ್ಶ್ ಅಯ್ಯಂಗಾರ್’ ಯೂಟ್ಯೂಬ್ ಚಾನಲಿನಲ್ಲಿ ಬಿಡುಗಡೆಯಾಗಿದೆ. ಇದು ಆದರ್ಶ್ ಅಯ್ಯಂಗಾರ್ ಅವರು ತಮ್ಮ ಬ್ಯಾನರ್ ಮೂಲಕ ಹೊರ ತರುತ್ತಿರುವ ಏಳನೇ ವಿಡಿಯೋ ಹಾಡಾಗಿದ್ದು ಅವರ ನಿರ್ಮಾಣದ “ತಿಮ್ಮನ ಮೊಟ್ಟೆಗಳು” ಚಿತ್ರ ಕೂಡ ಬಿಡುಗಡೆಗೆ ಸಿದ್ಧವಾಗಿದೆ.
ಸುಂದರ ತಾಣಗಳಲ್ಲಿ ಚಿತ್ರೀಕರಿಸಿರುವ ಹಾಡಿಗೆ ಹೇಮಂತ್ ಜೋಯಿಸ್ ಸಂಗೀತ ನೀಡಿದ್ದು ರಕ್ಷಿತ್ ತೀರ್ಥಹಳ್ಳಿ ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ. ಕಿರಿಕ್ ಪಾರ್ಟಿ ಚಿತ್ರದಲ್ಲಿ ನಟಿಸಿದ್ದ ಶಂಕರಮೂರ್ತಿ ಈ ಹಾಡಿನಲ್ಲಿ ಒಂದೊಳ್ಳೆ ಪಾತ್ರ ನಿರ್ವಹಿಸಿದ್ದಾರೆ. ಅವರ ಜೊತೆಗೆ ಆದರ್ಶ್ ಅಯ್ಯಂಗಾರ್ ಹಾಗೂ ಹೊಸ ಪ್ರತಿಭೆ ಸಂದೀಪ್ ಕುಂದಾದ್ರಿ ಪ್ರಮುಖ ಪಾತ್ರದಲ್ಲಿದ್ದಾರೆ. ಉಳಿದಂತೆ ಸಮೀರ್ ನಗರದ್, ನೇಹಾ ಶಾಂತವೇರಿ, ಅರ್ಚನ ಎಸ್ ಎಚ್, ಅನಂತ್ ಭಟ್ ಹೊದಲ ಮುಂತಾದವರು ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಪ್ರಶಾಂತ್ ಸಾಗರ ಅವರ ಕ್ಯಾಮರ ಕೆಲಸ ಕಣ್ಣಿಗೆ ಮುದ ನೀಡುತ್ತದೆ. ಸುಧೀರ್ ಎಸ್ ಜೆ ಸಂಕಲನ ಅಚ್ಚುಕಟ್ಟಾಗಿದೆ.
ಬರಹಗಾರನೊಬ್ಬ ತನ್ನ ಕಥೆ ಹುಡುಕಾಟದಲ್ಲಿ ಎರಡು ಪಾತ್ರಗಳೊಡನೆ ಮಲೆನಾಡಿನ ಪುಟ್ಟ ಪರಿಸರದಲ್ಲಿ ಸಂಚರಿಸುವುದರ ಸುತ್ತಾ ಹಾಡು ಸಾಗುತ್ತದೆ. ಎರಡು ಭಿನ್ನ ಪ್ರೇಮಕಥೆಗಳನ್ನು ನಿನಿಮ್ಯಾಟಿಕ್ ಆಗಿ ತೋರಿಸಲಾಗಿದೆ. ಕಥೆ ಸಾಗುತ್ತಾ ಬರಹಗಾರ ಆ ಕಥೆಗಳಿಗೆ ಯಾವ ಅಂತ್ಯ ಕೊಡುತ್ತಾನೆ ಎಂಬುವುದರೊಂದಿಗೆ ಹಾಡು ಕೊನೆಗೊಳ್ಳುತ್ತದೆ.