ಬೆಂಗಳೂರು: ಕನ್ನಡದ ಯುವನಟ ಕಿರಣ್ ರಾಜ್(Kiran raj) ಚಲಿಸುತ್ತಿದ್ದ ಕಾರು ಅಪಘಾತವಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಹೀಗಾಗಿ ಅವರನ್ನು ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಬೆಂಗಳೂರಿನ ಕೆಂಗೇರಿ ಹತ್ತಿರ ಮಂಗಳವಾರ ರಾತ್ರಿ ಅವರ ಕಾರು ಅಪಘಾತವಾಗಿದೆ. ಕಿರಣರಾಜ್ ಇದ್ದ ಕಾರನ್ನು ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಡ್ರೈವ್ ಮಾಡುತ್ತಿದ್ದರು. ಈ ವೇಳೆ ಕಾರಿನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಹೀಗಾಗಿ ಕಾರು ಸಂಪೂರ್ಣ ಜಖಂಗೊಂಡಿದೆ. ಕಾರಿನ ಮುಂದಿನ ಚಕ್ರ ಕಳಚಿ ಬಿದ್ದಿರುವುದು ಅಪಘಾತದ ತೀವ್ರತೆಗೆ ಸಾಕ್ಷಿಯಾಗಿದೆ.
31 ವರ್ಷದ ಕಿರಣರಾಜ್ ರನ್ನು ಆಸ್ಪತೆಗೆ ದಾಖಲಿಸಲಾಗಿದ್ದು, ಎದೆಯ ಭಾಗಕ್ಕೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಹೀಗಾಗಿ ಅವರನ್ನು ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.
ಗುಟ್ಟಯ್ಯನ ಪಾಳ್ಯದ ಸಿದ್ದೇಶ್ವರ ನಿರಾಶ್ರಿತ ಕೇಂದ್ರಕ್ಕೆ ಭೇಟಿ ನೀಡಿ ಮರಳುತ್ತಿದ್ದ ಸಂದರ್ಭದಲ್ಲಿ ಈ ಅವಘಡ ನಡೆದಿದೆ ಎನ್ನಲಾಗಿದೆ. ಕಿರಣರಾಜ್ ಅಲ್ಲಿಗೆ ತೆರಳಿ ಪ್ರತಿವಾರವೂ ಊಟ ನೀಡುತ್ತಿದ್ದರು ಎಂದು ತಿಳಿದು ಬಂದಿದೆ.
ಕಿರಣರಾಜ್ ”ಕನ್ನಡತಿ” ಧಾರಾವಾಹಿಯ ಹರ್ಷ ಪಾತ್ರದ ಮೂಲಕ ಜನಪ್ರಿಯರಾಗಿದ್ದರು. ಅಲ್ಲದೇ, ಚಿತ್ರರಂಗಕ್ಕೂ ಕಾಲಿಟ್ಟು ರಾನಿ ಚಿತ್ರದಲ್ಲಿ ನಟಿಸಿದ್ದರು. ಅವರ ನಟನೆಯ ಚಿತ್ರ ಗುರುವಾರ ತೆರೆ ಕಾಣಲಿದೆ.
ಕನ್ನಡ ಕಿರುತೆರೆ ಮಾತ್ರವಲ್ಲದೆ ತೆಲುಗು ಮತ್ತು ಹಿಂದಿಯಲ್ಲೂ ಧಾರವಾಹಿ ಮತ್ತು ಚಿತ್ರಗಳಲ್ಲಿ ನಟಿಸಿದ್ದಾರೆ.