ಮಂಡ್ಯ : ರಾಜ್ಯದಲ್ಲಿ ಅಬಕಾರಿ ಇಲಾಖೆಯ 6 ಸಾವಿರ ಕೋಟಿ ಭ್ರಷ್ಟಾಚಾರದ ಆರೋಪ ದೊಡ್ಡ ಬಿರುಗಾಳಿ ಎಬ್ಬಿಸಿರುವ ಬೆನ್ನಲ್ಲೇ, ಮದ್ಯದಂಗಡಿ ಲೈಸೆನ್ಸ್ ನೀಡಲು ಬರೋಬ್ಬರಿ 60 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟ ಆರೋಪದಲ್ಲಿ ಮಂಡ್ಯ ಜಿಲ್ಲಾ ಅಬಕಾರಿ ಉಪಆಯುಕ್ತ (DC) ನಾಗಶಯನ ಅವರನ್ನು ಸರ್ಕಾರ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.
ಪ್ರಕರಣದ ಹಿನ್ನೆಲೆ |
ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ ಸುಂದರ್ ಎಂಬುವವರು ಹೊಸದಾಗಿ ಸಿಎಲ್-7 (CL-7) ಬಾರ್ ತೆರೆಯಲು ಪರವಾನಗಿ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ, ಅಬಕಾರಿ ಅಧಿಕಾರಿಗಳು ಸಣ್ಣಪುಟ್ಟ ಕಾರಣಗಳನ್ನು ನೀಡಿ ಪದೇ ಪದೇ ಅರ್ಜಿಯನ್ನು ವಜಾ ಮಾಡುತ್ತಿದ್ದರು. ಅರ್ಜಿದಾರ ಸುಂದರ್ ಅವರು ಈ ಬಗ್ಗೆ ನ್ಯಾಯಾಲಯದ ಮೊರೆ ಹೋಗಿ, ನ್ಯಾಯಾಲಯದಿಂದ ಪರವಾನಗಿ ನೀಡುವಂತೆ ಆದೇಶ ತಂದಿದ್ದರೂ ಸಹ ಅಧಿಕಾರಿಗಳು ಲೈಸೆನ್ಸ್ ನೀಡಲು ನಿರಾಕರಿಸಿದ್ದರು.
ಪರವಾನಗಿ ನೀಡಬೇಕಾದರೆ ₹60 ಲಕ್ಷ ಲಂಚ ನೀಡಬೇಕು ಎಂದು ಉಪ ಆಯುಕ್ತ ನಾಗಶಯನ ಅವರು ಸುಂದರ್ ಅವರಿಗೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ. ಈ ಭ್ರಷ್ಟಾಚಾರದ ಆಡಿಯೋ ಸಂಭಾಷಣೆಯನ್ನು ರೆಕಾರ್ಡ್ ಮಾಡಿಕೊಂಡಿದ್ದ ಸುಂದರ್, ಧೃತಿಗೆಡದೆ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಕಳೆದ ಒಂದು ವರ್ಷದಿಂದ ಈ ಭ್ರಷ್ಟಾಚಾರದ ವಿರುದ್ಧ ಸುಂದರ್ ನಿರಂತರವಾಗಿ ಏಕಾಂಗಿ ಹೋರಾಟ ನಡೆಸುತ್ತಾ ಬಂದಿದ್ದರು.
ಈ ಪ್ರಕರಣವು ಪ್ರಸ್ತುತ ನಡೆಯುತ್ತಿರುವ ವಿಧಾನಸಭಾ ಅಧಿವೇಶನದಲ್ಲೂ ಭಾರಿ ಸದ್ದು ಮಾಡಿತ್ತು. ರಾಜ್ಯದಲ್ಲಿ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಅಹೋರಾತ್ರಿ ಧರಣಿ ನಡೆಸುತ್ತಿರುವ ಸಂದರ್ಭದಲ್ಲೇ, ಮಂಡ್ಯದ ಈ ಹಗರಣವು ಸರ್ಕಾರದ ಭ್ರಷ್ಟಾಚಾರದ ಮುಖವಾಡವನ್ನು ಬಯಲು ಮಾಡಿದೆ ಎಂದು ವಿರೋಧ ಪಕ್ಷಗಳು ವಾಗ್ದಾಳಿ ನಡೆಸಿದ್ದವು. ಸದನದಲ್ಲಿನ ತೀವ್ರ ಚರ್ಚೆ ಮತ್ತು ಲೋಕಾಯುಕ್ತಕ್ಕೆ ಸಲ್ಲಿಕೆಯಾಗಿದ್ದ ಸಾಕ್ಷ್ಯಾಧಾರಗಳನ್ನು ಪರಿಗಣಿಸಿದ ಸರ್ಕಾರ, ಕೊನೆಗೂ ಅಬಕಾರಿ ಅಧಿಕಾರಿ ನಾಗಶಯನ ವಿರುದ್ಧ ಶಿಸ್ತು ಕ್ರಮ ಜರುಗಿಸಿದೆ.
ಇದನ್ನೂ ಓದಿ : ಬಿಹಾರದ ಕುಖ್ಯಾತ ರೌಡಿಶೀಟರ್ ಅಪ್ಪ-ಮಗ ಬೆಂಗಳೂರಿನಲ್ಲಿ ಅರೆಸ್ಟ್!



















