ಉಡುಪಿ ; ಬೈಂದೂರು ಕ್ಷೇತ್ರಕ್ಕೆ ಸರಕಾರದ ಅನುದಾನಗಳು ಸರ್ಪಕವಾಗಿ ಬಾರದೆ ಇರುವುದರಿಂದ ಕ್ಷೇತ್ರದಲ್ಲಿನ ಸಾಧ್ಯವಾದಷ್ಟು ಸಮಸ್ಯೆಗಳನ್ನು ನಿವಾರಿಸಲು ಮತ್ತು ಜನರಿಗೆ ಸೇವೆ ನೀಡಲು ಸಂಸದರ ಮತ್ತು ಶಾಸಕರ ಪರಿಕಲ್ಪನೆಯಲ್ಲಿ ವಿವಿಧ ಕಂಪನಿಗಳ ಸಿ.ಎಸ್.ಆರ್. ನಿಧಿಗಳ ಮೂಲಕ ಸುಮಾರು ರೂ.20ಕೋಟಿ ಅನುದಾನ ಕ್ಷೇತ್ರದ ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ವಿನಿಯೋಗಿಸಲಾಗಿದೆ ಎಂದು ಫೆ.5ರಂದು ಉಪ್ಪುಂದದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಮೃದ್ಧ ಬೈಂದೂರು ಇದರ ಅಧ್ಯಕ್ಷ ಬಿ.ಎಸ್.ಸುರೇಶ್ ಶೆಟ್ಟಿ ಹೇಳಿದರು.
ಬೈಂದೂರು ಉತ್ಸವದ ಬಳಿಕ ಕ್ಷೇತ್ರದ ರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸುಮಾರು ರೂ.03 ಕೋಟಿ ಖಾಸಗಿ ಕಂಪನಿಗಳ ಸಿ.ಎಸ್.ಆರ್. ನಿಧಿ ಕ್ಷೇತ್ರಕ್ಕೆ ಬಂದಿದೆ. ಸಮೃದ್ಧ ಬೈಂದೂರಿನ 300 ಟ್ರೀಸ್ ಯೋಜನೆ ಮೂಲಕ 100 ಹೆಚ್ಚು ಶಾಲೆಗಳಿಗೆ ತರಗತಿ ಕೋಣೆಗಳು, ಶೌಚಾಲಯ, ಪೀಠೋಪಕರಣ, ಪುಸ್ತಕಗಳು, ಶಾಲಾ ಬ್ಯಾಗ್, ಲೈಬ್ರರಿ, ಸ್ಮರ್ಟ್ ಕ್ಲಾಸ್, ಕಂಪ್ಯೂಟರ್ ಲ್ಯಾಬ್, ಕ್ರೀಡಾ ಸಾಮಗ್ರಿಗಳು ಸೇರಿದಂತೆ ಹಲವು ಯೋಜನೆ ಮೂಲಕ ಸರಕಾರಿ ಶಾಲೆಗಳನ್ನು ಬಲಗೊಳಿಸಲಾಗುತ್ತಿದೆ. ರೋಬೊಸಾಫ್ಟ್ ಟೆಕ್ನಾಲಜಿಸ್ ಸಂಸ್ಥೆ 1 ಕೋಟಿಗೂ ಮಿಕ್ಕಿ ಅನುದಾನ ನೀಡಿದ್ದು, ಬೈಂದೂರು ಸರಕಾರಿ ಮಾದರಿ ಶಾಲೆಯ ಕಟ್ಟಡದ ಭೂಮಿ ಪೂಜೆಗೆ ಕಂಪನಿಯ ಸಿಇಓ ರೋನ್ ಮಾನ್ ಭೂಮಿ ಪೂಜೆಗೆ ಆಗಮಿಸಲಿದ್ದಾರೆ ಎಂದರು.
ಗ್ರಾಮೀಣ ಭಾಗದ ಆಯ್ದ ಶಾಲೆಗಳ ಮಕ್ಕಳಿಗೆ ಸೈಕಲ್ ವಿತರಣೆ ನಡೆಯಲಿದೆ. ಶಾಸಕರ ವಿಶೇಷ ಮನವಿ ಮೇರೆಗೆ ಎಂ.ಆರ್.ಪಿ.ಎಲ್ ಸಂಸ್ಥೆ ಒಂದು ಕೋಟಿ, ಕ್ಯಾನ್ ಫಿನ್ ಹೋಮ್ ಲಿ. ಸಂಸ್ಥೆ ರೂ. 1.5 ಕೋಟಿ ಅನುದಾನವನ್ನು ಕ್ಷೇತ್ರಕ್ಕೆ ನೀಡಿದೆ. ಕಾಲೇಜುಗಳಿಗೆ ಸೋಲಾರ್ ಬ್ಯಾಕ್ ಅಪ್ ಸಿಸ್ಟಮ್ ಅಳವಡಿಕೆ, ಶೌಚಾಲಯ ಯೋಜನೆಗಳನ್ನು ಪೂರ್ಣಗೊಳಿಸಿದೆ. ಸ್ವಯಂ ಸ್ಪೂರ್ತಿ ಫೌಂಡೇಶನ್ ಬೆಂಗಳೂರು, ಯೂಥ್ ಫಾರ್ ಸೇವಾ, ರಮಣಶ್ರೀ ಟ್ರಸ್ಟ್ ಬೆಂಗಳೂರು ಕೈಜೋಡಿಸಿದೆ.
ಹೇನಬೇರುನಲ್ಲಿ ಸೇವಾಧಾಮದ ಮೂಲಕ ಬೆನ್ನು ಹುರಿ ಅಪಘಾತಕ್ಕೆ ಒಳಗಾದ ದಿವ್ಯಾಂಗರು ಇದರ ಪ್ರಯೋಜನ ಪಡೆಯಲಿದ್ದಾರೆ. ಕೆಎಂಸಿ ಮಣಿಪಾಲ್ ನೆರವಿನೊಂದಿಗೆ ಅಂಜಲಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಮತ್ತು ಎಜೆನ್ಸಿ ಘಟಕ ಸ್ಥಾಪನೆ ಮಾಡಲಾಗಿದೆ. ಬೈಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಮೃದ್ಧ ಬೈಂದೂರು ವತಿಯಿಂದ 1.5 ಲಕ್ಷ ವೆಚ್ಚದಲ್ಲಿ ಡಯಾಲಿಸಿಸ್ ಕೇಂದ್ರಕ್ಕೆ ಉಪಯೋಗವಾಗುವ ರಕ್ತ ಪರೀಕ್ಷೆ ಯಂತ್ರವನ್ನು ನೀಡಲಾಗಿದೆ.
ಕ್ಷೇತ್ರಕ್ಕೆ 300ಕ್ಕೂ ಅಧಿಕ ಕಾಲು ಸಂಕಗಳ ಅಗತ್ಯವಿದ್ದು, ಡಾ. ಆರ್ ಅರುಣಾಚಲಂ ಚಾರಿಟೇಬಲ್ ಟ್ರಸ್ಟ್ ಸಹಯೋಗದೊಂದಿಗೆ 25 ಹೊಸ ಕಾಲು ಸಂಕ ಪೂರ್ಣಗೊಳಿಸುವ ಗುರಿ ಹೊಂದಿದೆ ಎಂದರು.
ಇದನ್ನೂ ಓದಿ : ಇಂದಿನಿಂದ ಮೂರು ದಿನ ಎಡೆದೊರೆ ನಾಡಲ್ಲಿ ರಾಯಚೂರು ಜಿಲ್ಲಾ ಉತ್ಸವ!



















