ಮಂಗಳೂರು: ಬಂಟ್ವಾಳದಲ್ಲಿ (Bantwal) ನಡೆದಿದ್ದ ಅಬ್ದುಲ್ ರಹಿಮಾನ್ (Abdul Rahiman) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಕನಪಾಡಿಯಲ್ಲಿ ಬಂಟ್ವಾಳದ ದೀಪಕ್(21), ಪೃಥ್ವಿರಾಜ್(21), ಚಿಂತನ್(19) ಎಂಬ ಆರೋಪಿಗಳನ್ನು ಬಂಧಿಸಲಾಗಿದೆ. ಈ ವಿಷಯವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್ ಮಾತನಾಡಿದ್ದಾರೆ.
ಮೂವರು ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದ್ದು, ಬಂಧಿತರು ಕೊಲೆ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದಾರೆ. ಅಲ್ಲದೇ, ಮತ್ತಿಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಆರೋಪಿಗಳ ಪತ್ತೆಗಾಗಿ ಐದು ವಿಶೇಷ ತಂಡ ರಚಿಸಲಾಗಿತ್ತು. ಇಂದು ಮೂವರನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಲಾಗಿದೆ ಎಂದಿದ್ದಾರೆ. ಅಲ್ಲದೇ, ಇನ್ನುಳಿದ ಆರೋಪಿಗಳಿಗಾಗಿ ಬಲೆ ಬೀಸಲಾಗಿದೆ ಎಂದಿದ್ದಾರೆ.
ಕಟ್ಟಡದ ಕೆಲಸಕ್ಕೆ ತುರ್ತಾಗಿ ಒಂದು ಲೋಡ್ ಮರಳು ತರುವಂತೆ ಅಬ್ದುಲ್ ರಹಿಮಾನ್ ಗೆ ದೀಪಕ್ ಕರೆ ಮಾಡಿದ್ದಾನೆ. ಮರಳು ಇಳಿಸುತ್ತಿದ್ದಾಗ ಅಬ್ದುಲ್ ರಹಿಮಾನ್ ಮೇಲೆ ಹಲ್ಲೆ ನಡೆದಿದೆ. ಬೈಕ್ ನಲ್ಲಿ ಬಂದಿದ್ದ ಇಬ್ಬರು ತಲ್ವಾರ್ ನಿಂದ ಹಲ್ಲೆ ನಡೆಸಿದ್ದಾರೆ. ಕೊಲೆ ಸಂಚಿನಲ್ಲಿ ಬಂಧಿತ ಆರೋಪಿಗಳು ನೇರವಾಗಿ ಭಾಗಿಯಾಗಿದ್ದಾರೆ ಎಂದಿದ್ದಾರೆ. ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣದಲ್ಲಿ 15 ಜನರ ವಿರುದ್ಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಗಾಯಗೊಂಡಿದ್ದ ಕಲಂದರ್ ಶಫಿ ಮಾಹಿತಿ ಮೇರೆಗೆ ನಿಸಾರ್ ಎಂಬುವವರು ದೂರು ನೀಡಿದ್ದರು ಎಂದಿದ್ದಾರೆ.