ಬೆಂಗಳೂರು: ಬಡವರು, ಅಸಂಘಟಿತ ವಲಯದ ಕಾರ್ಮಿಕರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರವು ಆಮ್ ಆದ್ಮಿ ವಿಮಾ ಯೋಜನೆಯನ್ನು (Aam Aadmi Bima Yojana Health Scheme) ಜಾರಿಗೊಳಿಸಿದೆ. ಯೋಜನೆಗೆ ಅರ್ಜಿ ಸಲ್ಲಿಸುವ ಮೂಲಕ ನಾಗರಿಕರು ಹಲವು ಪ್ರಯೋಜನಗಳನ್ನು, ವಿದ್ಯಾರ್ಥಿ ವೇತನ ಪಡೆಯಬಹುದಾಗಿದೆ. ಯೋಜನೆಯಿಂದ ಏನೆಲ್ಲ ಅನುಕೂಲಗಳಿವೆ? ಅರ್ಜಿ ಸಲ್ಲಿಸುವುದು ಹೇಗೆ ಎಂಬುದರ ಮಾಹಿತಿ ಇಲ್ಲಿದೆ.
ಇದೊಂದು ವಿಮಾ ಯೋಜನೆಯಾಗಿದೆ. ಈ ಯೋಜನೆಯ ಪ್ರೀಮಿಯಂ ಅನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 50:50 ಅನುಪಾತದಲ್ಲಿ ಹಂಚಿಕೊಳ್ಳುತ್ತವೆ. ಒಟ್ಟು ಪ್ರೀಮಿಯಂ ಪ್ರತಿ ವ್ಯಕ್ತಿಗೆ ವರ್ಷಕ್ಕೆ 200 ರೂ. ಆಗಿದೆ. ಇದರಲ್ಲಿ 100 ರೂ. ಕೇಂದ್ರ ಸರ್ಕಾರ, 30 ರೂ. ರಾಜ್ಯ ಸರ್ಕಾರ ಮತ್ತು 70 ರೂ. ಫಲಾನುಭವಿ ಭರಿಸುತ್ತಾರೆ. ಪ್ರೀಮಿಯಂ ಮೊತ್ತವನ್ನು ಎಲೆಕ್ಟ್ರಾನಿಕ್ ಕ್ಲಿಯರೆನ್ಸ್ ಸಿಸ್ಟಮ್ (ಇಸಿಎಸ್) ಅಥವಾ ಇತರ ವಿಧಾನಗಳ ಮೂಲಕ ಫಲಾನುಭವಿಯ ಬ್ಯಾಂಕ್ ಖಾತೆಯಿಂದ ಕಡಿತಗೊಳಿಸಲಾಗುತ್ತದೆ.
ವಿಮೆಯ ಸೌಲಭ್ಯಗಳೇನು?
ವಿಮೆ ಮಾಡಿಸಿದ ವ್ಯಕ್ತಿಯು ಸಹಜವಾಗಿ ಮೃತಪಟ್ಟರೆ, ಆತನ ಕುಟುಂಬಸ್ಥರಿಗೆ 30 ಸಾವಿರ ರೂ. ನೀಡಲಾಗುತ್ತದೆ. ಇನ್ನು ಅಪಘಾತದಲ್ಲಿ ಮೃತಪಟ್ಟರೆ 75 ಸಾವಿರ ರೂ., ಅಪಘಾತದಲ್ಲಿ ಭಾಗಶಃ ಅಂಗವಿಕಲನಾದರೆ 37,500 ರೂ., ಶಾಶ್ವತ ಅಂಗವೈಕಲ್ಯ ಉಂಟಾದರೆ 75 ಸಾವಿರ ರೂ., ವಿಮೆ ಮಾಡಿಸಿದ ವ್ಯಕ್ತಿ ಮೃತಪಟ್ಟರೆ, ಆ ವ್ಯಕ್ತಿಯ ಮಕ್ಕಳ ಶಿಕ್ಷಣಕ್ಕೆ ಮಾಸಿಕ 100 ರೂ. ಸ್ಕಾಲರ್ ಶಿಪ್ ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
- ಎಲ್ಐಸಿಯ https://licindia.in/ ವೆಬ್ ಸೈಟ್ ಗೆ ಭೇಟಿ ನೀಡಿ
- LIC Aam Aadmi Bima Yojana Apply Online ಮೇಲೆ ಕ್ಲಿಕ್ ಮಾಡಿ
- ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಿ, ಎಲ್ಲ ಮಾಹಿತಿ ಒದಗಿಸಿ
- ಅಗತ್ಯ ದಾಖಲೆಗಳನ್ನು ಅಪ್ ಲೋಡ್ ಮಾಡಿ
- ಸಬ್ ಮಿಟ್ ಮೇಲೆ ಕ್ಲಿಕ್ ಮಾಡಿ
ಕೃಷಿ ಕಾರ್ಮಿಕರು, ನೇಕಾರರು, ಮೀನುಗಾರರು, ಕೈಮಗ್ಗ ಕಾರ್ಮಿಕರು, ರಿಕ್ಷಾ ಎಳೆಯುವವರು/ಆಟೋ ಚಾಲಕರು, ಬೀಡಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಗ್ರಾಮೀಣ ಬಡವರು, ಅಂಗನವಾಡಿ ಶಿಕ್ಷಕರು, ಸಫಾಯಿ ಕರ್ಮಚಾರಿಗಳು, ಪಟಾಕಿ ಕೆಲಸಗಾರರು, ತೋಟಗಳ ಕಾರ್ಮಿಕರು ಸೇರಿ ಅಸಂಘಟಿತ ವಲಯದ ಕಾರ್ಮಿಕರು ಅರ್ಜಿ ಸಲ್ಲಿಸಬಹುದಾಗಿದೆ.
ಬೇಕಾಗುವ ದಾಖಲೆಗಳು
ಅರ್ಜಿ ಸಲ್ಲಿಸುವವರ ಗುರುತಿನ ಚೀಟಿ, ನಾಮನಿರ್ದೇಶಿತ ಅರ್ಜಿ, ವಿಳಾಸದ ದಾಖಲೆ, ಆದಾಯ ಪ್ರಮಾಣಪತ್ರ ಯಾವುದೇ ಕಂಪನಿ ಅಥವಾ ಸರ್ಕಾರಿ ಇಲಾಖೆಯಿಂದ ನೀಡಲಾದ ಗುರುತಿನ ಚೀಟಿ (ಐಡಿ) ಸಲ್ಲಿಸಬೇಕು.