ಗದಗ: ಯುವಕನೊಬ್ಬ ಆನ್ಲೈನ್ ಗೇಮ್ (Online game) ಗೀಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಈ ಘಟನೆ ಗದಗ (Gadag) ನಗರದ ಹಳೆ ಜಿಲ್ಲಾಧಿಕಾರಿ ಕಚೇರಿಯ ವೃತ್ತದ ಹತ್ತಿರ ಇರುವ ಲಾಡ್ಜ್ ನಲ್ಲಿ ನಡೆದಿದೆ. ಮೃತ ಯುವಕನನ್ನು ಶಿರಹಟ್ಟಿ ಮೂಲದ 37 ವರ್ಷದ ಜಗದೀಶ್ ಹಳೆಮನಿ ಎಂದು ಗುರುತಿಸಲಾಗಿದೆ.
ಸಾವನ್ನಪ್ಪಿರುವ ಜಗದೀಶ್ ವ್ಯಾಪಾರಸ್ಥಾನಿಗ್ದದು, ಹಲವು ತಿಂಗಳುಗಳಿಂದ ಆನ್ ಲೈನ್ ಗೇಮ್ ನ ಗೀಳಿಗೆ ಬಿದ್ದಿದ್ದ. ಇದರಿಂದಾಗಿ ಲಕ್ಷಾಂತರ ರೂ. ಹಣ ಕಳೆದುಕೊಂಡಿದ್ದ. ಇದರಿಂದ ಮನನೊಂದು ಭಾನುವಾರ ಶಿರಹಟ್ಟಿಯಿಂದ ಗದಗನಲ್ಲಿರುವ ಲಾಡ್ಜ್ ವೊಂದಕ್ಕೆ ಬಂದಿದ್ದ. ನಂತರ ಅಲ್ಲಿ ಮದ್ಯ ಕುಡಿದು ನಶೆಯಲ್ಲಿ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಡೆತ್ ನೋಟ್ ನಲ್ಲಿ ಆನ್ಲೈನ್ ಗೇಮ್ ಬ್ಯಾನ್ ಮಾಡಬೇಕೆಂದು ಉಲ್ಲೇಖಿಸಿದ್ದಾನೆ. ಈ ಕುರಿತು ಶಿರಹಟ್ಟಿ ಶಾಸಕ ಡಾ.ಚಂದ್ರು ಲಮಾಣಿ ಅವರು ಅಧಿವೇಶನದಲ್ಲಿ ಚರ್ಚೆ ಮಾಡಬೇಕು. ನನ್ನಂತೆ ಬಹಳ ಜನರು ಹಾಳಾಗಿದ್ದಾರೆ. ದಯವಿಟ್ಟು ಆನ್ಲೈನ್ ಗೇಮ್ ಬ್ಯಾನ್ ಮಾಡುವಂತೆ ಚರ್ಚಿಸಿ ಎಂದು ಮನವಿ ಮಾಡಿದ್ದಾರೆ. ಈ ಕುರಿತು ಗದಗ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.