ಶಿವಮೊಗ್ಗ: ಆಫ್ರಿಕದ ಗಿನಿಯಲ್ಲಿ ಮಲೇರಿಯಾದಿಂದ ರಾಜ್ಯದ ಹಕ್ಕಿ ಪಿಕ್ಕಿ ಸಮುದಾಯದ ಮಹಿಳೆ ಸಾವನ್ನಪ್ಪಿರುವ ಘಟನೆ ನಡೆದಿದೆ.
ಈಗ ಮೃತ ದೇಹವನ್ನು ಭಾರತಕ್ಕೆ ತರಲು ಕುಟುಂಬಸ್ಥರು ಪರದಾಟ ನಡೆಸುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯ ಮಲ್ಲಿಗೇನಹಳ್ಳಿ ಬಳಿಯ ತುಂಗಾ ಚಾನಲ್ ಪಕ್ಕದ ಹಕ್ಕಿಪಿಕ್ಕಿ ಕ್ಯಾಂಪ್ನ ಶಮೀಲಾ (41) ಸಾವನ್ನಪ್ಪಿರುವ ಮಹಿಳೆ ಎನ್ನಲಾಗಿದೆ.
ಶಮೀಲಾ ಅವರು ಏ. 8ರಂದು ಆಫ್ರಿಕಾದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಆಸ್ಪತ್ರೆಯ ಬಿಲ್ ಭಾರತೀಯ ರೂಪಾಯಿಯಂತೆ 3 ಲಕ್ಷ ರೂ.ಆಗಿದೆ. ಇದನ್ನು ಕಟ್ಟಲು ಕುಟುಂಬಸ್ಥರು ಪರದಾಡುತ್ತಿದ್ದಾರೆ. ಮೂರು ಲಕ್ಷ ರೂ. ಪಾವತಿಸದ ಹಿನ್ನೆಲೆಯಲ್ಲಿ ಆಸ್ಪತ್ರೆ ಸಿಬ್ಬಂದಿ ಮೃತದೇಹ ನೀಡುತ್ತಿಲ್ಲ.
ಹೀಗಾಗಿ ಮೃತದೇಹವನ್ನು ತರಲು ಭಾರತೀಯ ರಾಯಭಾರಿ ಕಚೇರಿಗೆ ಕುಟುಂಬಸ್ಥರು ಮನವಿ ಮಾಡುತ್ತಿದ್ದಾರೆ. ಶಮೀಲಾ ಅವರು ಕಳೆದ ಒಂದು ತಿಂಗಳ ಹಿಂದೆ ಆಫ್ರಿಕಾಗೆ ಭಾರತದ ಗಿಡಮೂಲಿಕೆಗಳನ್ನು ಮಾರಾಟ ಮಾಡಲು ಹೋಗಿದ್ದರು ಎನ್ನಲಾಗಿದೆ.