‘
ಚಂಡೀಗಢ: ಇಲ್ಲಿ ಸುಖ್ನಾ ಲೇಕ್ನ ತಟದಲ್ಲಿ ಅರಳಬೇಕಿದ್ದ ಒಂದು ಪ್ರೇಮ ಕಥೆ, ಕ್ರೌರ್ಯ ಮತ್ತು ಅಮಾನುಷ ಅಧ್ಯಾಯವಾಗಿ ಅಂತ್ಯಗೊಂಡಿದೆ. ಜೂನ್ 14ರ ರಾತ್ರಿ ನಡೆದ ನಿಗೂಢ ಸಾವು ಮತ್ತು ಅದರ ನಂತರದ ಘಟನೆಗಳು ಇಡೀ ನಗರವನ್ನೇ ಬೆಚ್ಚಿಬೀಳಿಸಿವೆ. ಹಾವು ಕಚ್ಚಿದ್ದರಿಂದ ಪ್ರಜ್ಞಾಹೀನಳಾಗಿದ್ದ ತನ್ನ ಪ್ರೇಯಸಿಯ ದೇಹವನ್ನು ನಿರ್ದಯವಾಗಿ ಪೊದೆಯಲ್ಲಿ ಎಸೆದು ಪರಾರಿಯಾಗಿದ್ದ 25 ವರ್ಷದ ಸೂರಜ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಇಲ್ಲಿನ ಸೆಕ್ಟರ್ 26ರ ಬರ್ದಾನಾ ಮಾರ್ಕೆಟ್ ಸ್ಲಮ್ ನಿವಾಸಿಗಳಾಗಿದ್ದ ಸೂರಜ್ ಮತ್ತು ರಬೀನಾ ಪರಸ್ಪರ ಪ್ರೀತಿಸುತ್ತಿದ್ದರು. ಜೂನ್ 14ರ ರಾತ್ರಿ ಸುಮಾರು 8.30ಕ್ಕೆ ರಬೀನಾ ಸೂರಜ್ಗೆ ಕರೆ ಮಾಡಿ ಸುಖ್ನಾ ಲೇಕ್ನಲ್ಲಿ ಭೇಟಿಯಾಗುವಂತೆ ಕೇಳಿಕೊಂಡಿದ್ದಳು. ಇ-ರಿಕ್ಷಾ ಚಾಲಕನಾಗಿದ್ದ ಸೂರಜ್, ಅವಳನ್ನು ಭೇಟಿಯಾಗಲು ಅಲ್ಲಿಗೆ ಹೋಗಿ, ತನ್ನ ರಿಕ್ಷಾವನ್ನು ಪಾರ್ಕ್ ಮಾಡಿ ಇಬ್ಬರೂ ನಡೆದುಕೊಂಡು ಹೋಗಿದ್ದಾರೆ.
ಅಲ್ಲಿನ ಮೆಟ್ಟಿಲುಗಳಿಂದ ಇಳಿಯುತ್ತಿದ್ದಾಗ, ಏಕಾಏಕಿ ರಬೀನಾಳಿಗೆ ಹಾವೊಂದು ಕಚ್ಚಿದೆ. ಅನಿರೀಕ್ಷಿತವಾಗಿ ನಡೆದ ಘಟನೆಯಿಂದ ಆಘಾತಕ್ಕೊಳಗಾದ ಆಕೆ, “ನನಗೆ ಹಾವು ಕಚ್ಚಿತು” ಎಂದು ಭಯದಿಂದ ಕಿರುಚಿದ್ದಾಳೆ. ಅದಾದ ಕೆಲವೇ ಕ್ಷಣಗಳಲ್ಲಿ ಆಕೆ ಕುಸಿದುಬಿದ್ದಿದ್ದಾಳೆ ಎಂದು ಸೂರಜ್ ಪೊಲೀಸರ ಬಳಿ ತನ್ನ ತಪ್ಪೊಪ್ಪಿಗೆಯಲ್ಲಿ ಹೇಳಿಕೊಂಡಿದ್ದಾನೆ. ಆದರೆ, ಇದು ಸತ್ಯವೇ ಅಥವಾ ಆತನ ಕಟ್ಟು ಕಥೆಯೇ ಎಂಬುದು ಪೊಲೀಸ್ ತನಿಖೆಯಿಂದ ಇನ್ನಷ್ಟೇ ತಿಳಿದುಬರಬೇಕಿದೆ.
ಪ್ರಜ್ಞಾಹೀನಳಾಗಿದ್ದ ರಬೀನಾಳನ್ನು ಮೊದಲಿಗೆ ಸೂರಜ್ ಎತ್ತಿಕೊಂಡು ತನ್ನ ಇ-ರಿಕ್ಷಾದೊಳಗೆ ಹಾಕಿದ್ದಾನೆ. ಬಳಿಕ ಸರ್ಕಾರಿ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಗೆ ಕರೆದೊಯ್ಯುವ ಆಲೋಚನೆ ಮಾಡಿದ್ದನಂತೆ. ಆದರೆ, ಅರ್ಧದಾರಿಯಲ್ಲೇ ಆಕೆ ಉಸಿರು ನಿಲ್ಲಿಸಿದ್ದಳು ಎಂದು ಸೂರಜ್ ಹೇಳಿಕೊಂಡಿದ್ದಾನೆ.
ರಬೀನಾ ಸತ್ತಳು ಎಂದು ಭಾವಿಸಿದ ಸೂರಜ್, ಭಯಭೀತರಾಗಿ, ತನ್ನ ಮೇಲೆ ಅಪರಾಧದ ಆರೋಪ ಬರಬಹುದು ಎಂದು ಹೆದರಿ, ಆಸ್ಪತ್ರೆಗೆ ಹೋಗುವ ಬದಲು, ರಿಕ್ಷಾವನ್ನು ಧನಾಸ್ ಲೇಕ್ ಕಡೆಗೆ ಮತ್ತು ಅಲ್ಲಿಂದ ಖುದಾ ಲಹೋರಾ ಸೇತುವೆಯ ಬಳಿಯ ನಿರ್ಜನ ಪ್ರದೇಶಕ್ಕೆ ಒಯ್ದು, ರಬೀನಾಳ ದೇಹವನ್ನು ನಿರ್ದಯವಾಗಿ ಪೊದೆಯಲ್ಲಿ ಎಸೆದು ಪರಾರಿಯಾಗಿದ್ದಾನೆ. ರಾತ್ರಿ ತಡವಾಗಿ ಮನೆಗೆ ಹಿಂದಿರುಗಿ, ಮರುದಿನ ಬೆಳಗ್ಗೆ ಪೊಲೀಸರು ಮತ್ತು ರಬೀನಾ ಕುಟುಂಬದಿಂದ ತಪ್ಪಿಸಿಕೊಳ್ಳಲು ಅಲ್ಲಿಂದಲೂ ಪರಾರಿಯಾಗಿದ್ದ.
ತಲೆಮರೆಸಿಕೊಂಡಿದ್ದ ಸೂರಜ್, ಕೊನೆಗೆ ಧನಾಸ್ನ EWS ಕಾಲೋನಿಯಲ್ಲಿ ಸಮಾಜ ಸೇವಕ ಮೊಹಮದ್ ಇರ್ಷಾದ್ ಎಂಬವರನ್ನು ಸಂಪರ್ಕಿಸಿದ್ದಾನೆ. ವಿಷಯವನ್ನೆಲ್ಲ ತಿಳಿಸಿ ತನ್ನನ್ನು ಪೊಲೀಸರ ಬಳಿಗೆ ಕರೆದೊಯ್ಯುವಂತೆ ಆತ ಇರ್ಷಾದ್ ಅವರನ್ನು ಕೋರಿಕೊಂಡಿದ್ದಾನೆ. ಸ್ಥಳೀಯ ಪೊಲೀಸರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಇರ್ಷಾದ್, ಸೂರಜ್ನನ್ನು ಸರಂಗ್ಪುರ್ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಬಳಿಕ ಸೂರಜ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಲಾಗಿದೆ.
‘ಹಾವು ಕಡಿತ’ ಸುಳ್ಳು ಕಥೆಯೇ?
ರಬೀನಾ ಹಾವಿನ ಕಡಿತದಿಂದಲೇ ಸಾವನ್ನಪ್ಪಿದ್ದಾಳೆ ಎಂದು ಆರೋಪಿ ಸೂರಜ್ ಹೇಳಿದ್ದಾನೆ. ಆದರೆ, ಪೊಲೀಸರು ಸೂರಜ್ನ ಈ ವಾದವನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಹಾವಿನ ಕಡಿತದ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಸಾವಿಗೆ ಇತರ ಸಂಭವನೀಯ ಕಾರಣಗಳು ಇರಬಹುದೆಂದು ಅಧಿಕಾರಿಗಳು ಬಲವಾಗಿ ಶಂಕಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸೂರಜ್ನನ್ನು ತೀವ್ರವಾಗಿ ವಿಚಾರಣೆ ಮಾಡಲಾಗುತ್ತಿದೆ. ಮರಣೋತ್ತರ ಪರೀಕ್ಷೆಯ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ವರದಿ ಬಂದ ನಂತರವೇ ಸಾವಿನ ನಿಜವಾದ ಕಾರಣ ಬಯಲಾಗಲಿದೆ.