ಕೊಪ್ಪಳದ ಹುಲಿಗೆಮ್ಮ ದೇವಿ ಪ್ರಸಿದ್ಧ ಕ್ಷೇತ್ರಗಳಲ್ಲಿ ಒಂದು. ಈ ಕ್ಷೇತ್ರಕ್ಕೆ ಪ್ರತಿ ದಿನ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರುತ್ತಾರೆ. ಶಕ್ತಿ ಯೋಜನೆಯಿಂದಾಗಿ ಮಹಿಳಾ ಭಕ್ತರ ಸಂಖ್ಯೆಯಲ್ಲಿ ಕೂಡ ಹೆಚ್ಚಳವಾಗಿದೆ.
ಆದರೆ, ಇತ್ತೀಚೆಗೆ ಶಕ್ತಿ ಯೋಜನೆಯಿಂದಾಗಿ ಬಸ್ ಗಳನ್ನು ಕಡಿಮೆ ಮಾಡಲಾಗಿದ್ದು, ಭಕ್ತರು ಪರದಾಟ ನಡೆಸುವಂತಾಗಿದೆ. ತಾಯಿಯ ದರ್ಶನ ಪಡೆದ ನಂತರ ಮರಳಿ ತಮ್ಮ ಊರುಗಳಿಗೆ ಹೋಗಲು ಭಕ್ತರು ಪರದಾಟ ನಡೆಸುವಂತಾಗಿದೆ. ಬಸ್ ಹತ್ತಲು ಪ್ರಯಾಣಿಕರು ಹರಸಾಹಸ ಪಡುತ್ತಿದ್ದಾರೆ.
ಮಂಗಳವಾರ ದರ್ಶನಕ್ಕೆ ಲಕ್ಷಾಂತರ ಜನ ಭಕ್ತರು ಆಗಮಿಸುತ್ತಿರುತ್ತರೆ. ಹುಲಿಗಿಯಿಂದ ಗಂಗಾವತಿ, ಹೊಸಪೇಟೆ, ಕೊಪ್ಪಳ ಕಡೆ ಹೋಗಲು ಬಸ್ ಗಳ ಕೊರತೆಯಾಗಿದ್ದರಿಂದಾಗಿ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಲ್ಕಾರು ಬಸ್ ನ ಜನ ಒಂದೇ ಬಸ್ ಏರಲು ಯತ್ನಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೀಗಾಗಿ ಸ್ಥಳೀಯರು ಹುಲಿಗಿಗೆ ಹೆಚ್ಚಿನ ಬಸ್ ಗಳ ವ್ಯವಸ್ಥೆ ಮಾಡಬೇಕೆಂದು ಮನವಿ ಮಾಡಿದ್ದಾರೆ.