ಬೆಂಗಳೂರು: ಪೂಜಾರಿಯೊಬ್ಬಾತ ಪರಿಹಾರ ದೋಷ ಮಾಡುವ ನೆಪದಲ್ಲಿ 26 ವರ್ಷದ ಯುವತಿ ಮೇಲೆ ಅತ್ಯಾಚಾರ ನಡೆಸಿರುವ ಘಟನೆಯೊಂದು ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನದ ಪುರದಮ್ಮ ದೇವಾಲಯದ ಪೂಜಾರಿ ದಯಾನಂದ ಎಂಬ ಕಾಮುಕನನ್ನು ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅರಸೀಕೆರೆ ತಾಲೂಕಿನ ಗೊಲ್ಲರಹಳ್ಳಿ ಗ್ರಾಪಂ ಸದಸ್ಯನಾಗಿರುವ ಆರೋಪಿ ದಯಾನಂದ, ಪುರದಮ್ಮ ದೇವಾಲಯದಲ್ಲೂ ಪೂಜೆ ಮಾಡುತ್ತಿದ್ದ. ಜಯಕರ್ನಾಟಕ ಸಂಘಟನೆಯಲ್ಲಿ ಕೂಡ ಗುರುತಿಸಿಕೊಂಡಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಸದ್ಯ ಪ್ರತಿಷ್ಟಿತ ಕಂಪನಿಯ ಸಾಫ್ಟ್ವೇರ್ ಉದ್ಯೋಗಿ ಸಂತ್ರಸ್ತೆ ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು ಮಂಗಳವಾರ ಆರೋಪಿ ದಯಾನಂದನನ್ನು ಅರಸೀಕೆರೆಯಲ್ಲಿ ಬಂಧಿಸಲಾಗಿದೆ. ಬೆಂಗಳೂರಿನ ವಿಚಾರಣಾ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಪೊಲೀಸರು 5 ದಿನ ಕಸ್ಟಡಿಗೆ ಪಡೆದಿದ್ದಾರೆ.
ಜು. 26ರಂದು ವಿಶೇಷ ಪೂಜೆ ನೆಪದಲ್ಲಿ ಭೇಟಿಯಾಗಿದ್ದ ದಯಾನಂದ ಉಪ್ಪಾರಪೇಟೆ ವ್ಯಾಪ್ತಿಯ ಲಾಡ್ಜ್ ವೊಂದಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದ. ಖಾಸಗಿ ಚಿತ್ರಗಳನ್ನು ಮೊಬೈಲ್ ನಲ್ಲಿ ಸೆರೆಹಿಡಿದಿದ್ದ. ಪೋಟೊಗಳನ್ನು ಕಳುಹಿಸಿ ಬ್ಲ್ಯಾಕ್ ಮೇಲ್ ಮಾಡಿ 1.20 ಲಕ್ಷ ರೂ. ಪಡೆದಿದ್ದ. ತನ್ನನ್ನು ಮದುವೆಯಾಗದಿದ್ದರೆ ಖಾಸಗಿ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆಯೊಡ್ಡಿದ್ದ ಎಂದು ಸಂತ್ರಸ್ತೆ ಆರೋಪಿಸಿ ದೂರು ನೀಡಿದ್ದಾರೆ.

ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ಮೊಬೈಲ್ ಜಪ್ತಿ ಮಾಡಿ ಎಫ್ ಎಸ್ ಎಲ್ ಗೆ ಕಳುಹಿಸಲು ಮುಂದಾಗಿದ್ದಾರೆ. ಆರೋಪಿಯು ಇದೇ ಮಾದರಿಯ ಕೃತ್ಯಗಳನ್ನು ಎಸಗಿದ್ದಾನೆಂದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.
ಅರಸೀಕೆರೆ ಮೂಲದ ಸಂತ್ರಸ್ತೆ ಬಾಗಲಕುಂಟೆ ವ್ಯಾಪ್ತಿಯಲ್ಲಿ ನೆಲೆಸಿದ್ದಾರೆ. ಇದೇ ವರ್ಷ ಏಪ್ರಿಲ್ನಲ್ಲಿ ಊರಿಗೆ ತೆರಳಿದ್ದ ವೇಳೆ ಸ್ನೇಹಿತೆಯರ ಜತೆ ಶಾಸ್ತ್ರ ಕೇಳಲು ಹೋದಾಗ ಪೂಜಾರಿ ದಯಾನಂದ ಪರಿಚಯವಾಗಿದ್ದ. ಆಗಾಗ್ಗೆ ದೂರವಾಣಿ ಕರೆ ಮಾಡುತ್ತಿದ್ದ ದಯಾನಂದ, ನಿನಗೆ ಹಲವು ದೋಷಗಳಿದ್ದು ಪರಿಹಾರ ಮಾಡಬೇಕಿದೆ. ಎಂದು ನಂಬಿಸಿ ಅತ್ಯಾಚಾರ ಸಗಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.