ಅಹಮದಾಬಾದ್: ಎಲ್ಲರೂ ವಿಮಾನ ದುರಂತದಲ್ಲಿ ಮಡಿದವರ ಹಿನ್ನೆಲೆಯ ಬಗ್ಗೆ ಚರ್ಚಿಸುತ್ತಿದ್ದರೆ, ವ್ಯಕ್ತಿಯೊಬ್ಬ ಅವಶೇಷಗಳಡಿಯಲ್ಲಿ ತನ್ನ 2 ವರ್ಷದ ಮಗಳು ಮತ್ತು ವಯಸ್ಸಾದ ತಾಯಿಗಾಗಿ ಹುಡುಕಾಡುತ್ತಿದ್ದ. ಅಮ್ಮ, ಮಗಳು ಎಲ್ಲಿ ಹೋದರು ಎಂದು ಗೊತ್ತಾಗದೇ, ಮೃತದೇಹವೂ ಸಿಗದೇ ಆತನ ದುಃಖ ಮಡುಗಟ್ಟಿತ್ತು.
ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಪ್ರೊಫೆಸರ್ ಗಳಿಗೆ ಮಧ್ಯಾಹ್ನದ ಊಟ ತಯಾರಿಸಿ ಕೊಡುತ್ತಿದ್ದವರೇ ಶರ್ಲಾಬೇನ್ ಠಾಕೂರ್. ಬಿಸಿ ಬಿಸಿ ಚಪಾತಿ, ಕರಿ, ಗುಜರಾತಿ ಖಾದ್ಯಗಳನ್ನು ಶರ್ಲಾಬೇನ್ ಪ್ರತಿ ದಿನ ಸಿದ್ಧಪಡಿಸಿ ಕೊಡುತ್ತಿದ್ದರೆ, ಅವರ ಮಗ ರವಿ ಅದನ್ನು ಕಾಲೇಜು ಕ್ಯಾಂಪಸ್, ಆಸ್ಪತ್ರೆಗಳಿಗೆ ಒಯ್ದು ಹಂಚುತ್ತಿದ್ದರು. ಗುರುವಾರ ಮಧ್ಯಾಹ್ನ ಶರ್ಲಾಬೆನ್ ಅವರು ಊಟವನ್ನು ತಾನೇ ಕೊಟ್ಟು ಬರುತ್ತೇನೆಂದು 2 ವರ್ಷದ ಮೊಮ್ಮಗಳು ಆಧ್ಯಾಳನ್ನು ಕರೆದುಕೊಂಡು ಬಿ.ಜೆ. ಮೆಡಿಕಲ್ ಕಾಲೇಜು ಹಾಸ್ಟೆಲ್ ಗೆ ತೆರಳಿದ್ದರು. ಅವರ ಮಗ ರವಿಯವರು ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗೆ ಆಹಾರ ತೆಗೆದುಕೊಂಡು ಹೋಗಿದ್ದರು.
ಮಧ್ಯಾಹ್ನ 1.50ರ ವೇಳೆಗೆ ವಿಮಾನವೊಂದು ಹಾಸ್ಟೆಲ್ ಕಟ್ಟಡಕ್ಕೆ ಅಪ್ಪಳಿಸಿದೆ ಎಂಬ ಸುದ್ದಿ ತಿಳಿಯಿತು. ಕೂಡಲೇ ನಾನು ಅಲ್ಲಿಗೆ ಧಾವಿಸಿದೆ. ಎಲ್ಲ ಮೃತದೇಹಗಳು ಚಿಂದಿಯಾಗಿ ಬಿದ್ದಿದ್ದವು, ಹಲವು ಮೃತದೇಹಗಳು ಗುರುತೇ ಸಿಗದಂತೆ ಸುಟ್ಟು ಕರಕಲಾಗಿದ್ದವು. ನನ್ನ ತಾಯಿ ಮತ್ತು ಮಗಳಿಗಾಗಿ ಹುಡುಕಾಡುತ್ತಿದ್ದೇನೆ. ಅವರು ಇನ್ನೂ ಪತ್ತೆಯಾಗಿಲ್ಲ ಎಂದು ಕಣ್ಣೀರು ಹಾಕಿದ್ದಾರೆ ರವಿ.
ನಾನು ಡಿಎನ್ಎ ಮಾದರಿಯನ್ನು ಕೊಟ್ಟಿದ್ದೇನೆ. ನನ್ನ ಅಮ್ಮ ಮೆಸ್ ಗೆ ಹೋದವರು ವಾಪಸ್ ಬರಲೇ ಇಲ್ಲ. ಅಮ್ಮ ಮತ್ತು ಪುತ್ರಿ ಕುಳಿತಿದ್ದ ಜಾಗವೂ ಸುಟ್ಟು ಹೋಗಿದೆ. ಅವರು ಎಲ್ಲಿದ್ದಾರೆಂದು ಗೊತ್ತಿಲ್ಲ. ಒಮ್ಮೆ ಅವರ ದೇಹವಾದರೂ ನನಗೆ ಸಿಕ್ಕಿದರೆ ಸಾಕು ಎಂದು ಭಾವುಕರಾಗಿ ನುಡಿದಿದ್ದಾರೆ.