ಮೈಸೂರು: ಉದ್ಯಮಿಯೋರ್ವ ಪತ್ನಿ, ಪುತ್ರನಿಗೆ ಗುಂಡಿಕ್ಕಿ ಕೊಂದು ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಮೈಸೂರು ಮೂಲದ ಉದ್ಯಮಿ ಹರ್ಷವರ್ಧನ್ ರಿಂದ ಈ ಕೃತ್ಯ ನಡೆದಿದೆ. ಮೂಲತಃ ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆಯ ಕಿಕ್ಕೇರಿ ಗ್ರಾಮದ ಹರ್ಷವರ್ಧನ್ (57) ಎಂಬಾತನೇ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಪತ್ನಿ, ಪುತ್ರನೊಟ್ಟಿಗೆ ಅಮೇರಿಕಾದ ನ್ಯೂ ಕ್ಯಾಸೆಲ್ ನಗರದ ನಿವಾಸದಲ್ಲಿ ವಾಸವಾಗಿದ್ದರು. ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದರು. ರೋಬೋಟ್ ಬಗ್ಗೆ ಅಪಾರ ಜ್ಞಾನ ಹೊಂದಿದ್ದರು. ಪ್ರಧಾನಿ ಮೋದಿ ಜೊತೆ ರೋಬೋಟ್ ಬಗ್ಗೆ ಚರ್ಚೆ ಸಹ ನಡೆಸಿದ್ದರು.
ಹೋಲೋ ವರ್ಡ್ಲ್ಸ್ ಕಂಪನಿ ಸ್ಥಾಪನೆ ಮಾಡಿದ್ದರು. ಈ ಕಂಪನಿಗೆ ಕ್ರಿಕೆಟಿಗ ಯುವರಾಜ್ ಸಿಂಗ್ ಅಂಬಾಸಿಡರ್ ಆಗಿದ್ದರು. ಮೈಸೂರಿನಲ್ಲಿ ಬ್ರಾಂಚ್ ಹೊಂದಿದ್ದ ಹರ್ಷವರ್ಧನ್ ಕೋವಿಡ್ ಹಿನ್ನಲೆಯಲ್ಲಿ 2022 ರಲ್ಲಿ ಕಂಪನಿ ಕ್ಲೋಸ್ ಮಾಡಿ ಅಮೆರಿಕಕ್ಕೆ ವಾಪಸ್ ಹೋಗಿದ್ದರು. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಸದ್ಯ ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದು, ಮತ್ತೋರ್ವ ಪುತ್ರ ಮನೆಯ ಹೊರಗಡೆ ಹೋಗಿದ್ದರಿಂದ ಬಚಾವ್ ಆಗಿದ್ದಾನೆ. ಈ ಕುರಿತು ಅಮೆರಿಕ ಪೊಲೀಸರು ತನಿಖೆ ಆರಂಭಿಸಿದ್ದಾರೆ.