ದಾವಣಗೆರೆ: ಪತ್ನಿ ಸಾವಿನಿಂದ ಬೇಸತ್ತ ವ್ಯಕ್ತಿಯೋರ್ವ ತನ್ನಿಬ್ಬರು ಮಕ್ಕಳ ಕತ್ತು ಹಿಸುಕಿ ಕೊಲೆ ಮಾಡಿ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ದಾವಣಗೆರೆ ನಗರದ ಎಸ್ ಪಿಎಸ್ ನಗರದ ಪಕ್ಕದಲ್ಲಿರುವ ರಾಜೀವ್ ಗಾಂಧಿ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಉದಯ್ (32) ಮಕ್ಕಳನ್ನು ಕೊಲೆ ಮಾಡಿ ತಾನು ನೇಣು ಬಿಗಿದುಕೊಂಡ ವ್ಯಕ್ತಿ. ಸಿಂಧುಶ್ರೀ (4) ಹಾಗೂ ಶ್ರೀಜಯ್ (3) ತಂದೆಯಿಂದ ಸಾವನ್ನಪ್ಪಿದ ದುರ್ದೈವ ಮಕ್ಕಳು.
ಕಳೆದ ಎಂಟು ತಿಂಗಳ ಹಿಂದೆ ಉದಯ್ ಅವರ ಪತ್ನಿ ಹೇಮಾ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಪತ್ನಿಯನ್ನು ಕಳೆದುಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿದ್ದ ಉದಯ್ ಇಂದು ಸಂಜೆ ಇಬ್ಬರು ಮಕ್ಕಳ ಕುತ್ತಿಗೆ ಹಿಸುಕಿ ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೂಲತಃ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲ್ಲೂಕು ಚಳಗೇರೆ ಗ್ರಾಮದ ಹೇಮಾ ಹಾಗೂ ಉದಯ್ ಇಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಹೀಗಾಗಿ ಉದಯ್ ಖಿನ್ನತೆಗೆ ಒಳಗಾಗಿದ್ದರು. ರಕ್ತದಲ್ಲಿ ಐ ಲವ್ ಯು ಹೇಮಾ ಎಂದು ಪತ್ನಿಯ ಹೆಸರನ್ನು ಗೋಡೆ ಮೇಲೆ ಬರೆದಿದ್ದ. ಏಳು ಪುಟಗಳ ಪತ್ರ ಬರೆದಿಟ್ಟು, ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.