ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಗುಡ್ಡೆಕೊಪ್ಪ ಗ್ರಾಮದ ಬಳಿ ಒಂಟಿ ಸಲಗ ಕಾಣಿಸಿಕೊಂಡಿದ್ದು, ಗ್ರಾಮಸ್ಥರು ಹಾಗೂ ಅನ್ನದಾತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರ ಊರಾದ ಗುಡ್ಡೆಕೊಪ್ಪ ಬಳಿ ಒಂಟಿ ಸಲಗ ಕಾಣಿಸಿಕೊಂಡಿದೆ. ಶನಿವಾರ ರಾತ್ರಿ ಕುಚ್ಚಲು, ಆರಗದ ಕಲ್ಗುಂಡಿ ಸಮೀಪ ಕಾಣಿಸಿಕೊಂಡಿದೆ.
ಈ ಆನೆ ಬೆಳಗಿನ ಜಾವ ಓಡಾಟ ಆರಂಭಿಸಿ, ಸರಿ ಸುಮಾರು 50 ಕಿ.ಮೀ ಕ್ರಮಿಸಿದೆ. ಮುತ್ತಿನಕೊಪ್ಪದ ಮೂಲಕ ತುಂಗಾ ನದಿ ದಾಟಿ ಮುಡುಬ, ಉಳ್ಳೂರು ಘಟ್ಟ, ಮಣಿವೆ, ಉಟ್ಟೂರು, ಕುಚ್ಚಲು ಪ್ರದೇಶಗಳಲ್ಲಿ ಸಂಚರಿಸಿ, ನಿನ್ನೆ ರಾತ್ರಿ ಬಾಳೇಗುಡ್ಡ ಕಾಡಿನಲ್ಲಿ ನಿದ್ದೆ ಮಾಡಿದೆ.
ಆನಂತರ ಮತ್ತೆ ಹಿರೇಬೈಲು, ಸೀಕೆ, ಕಾನಳ್ಳಿ, ದಾನಸಾಲೆ, ಹೊಸಬೀಡು, ಏಳುಮನೆ ಮಾರ್ಗ, ಕೋಣಂದೂರು, ಅರಳಸುರಳಿ, ನೊಣಬೂರು, ಗುಡೇಕೊಪ್ಪ, ಕಲ್ಲುಂಡಿ, ಪಟಮಕ್ಕಿ ಕಡೆ ಸಂಚರಿಸಿ ಆರಗಕ್ಕೆ ಆಗಮಿಸಿದೆ.
ಭದ್ರ ಅಭಯಾರಣ್ಯ ವ್ಯಾಪ್ತಿಯಿಂದ ತಪ್ಪಿಸಿಕೊಂಡು ಬಂದಿರುವ ಸುಮಾರು 15 ವರ್ಷದ ಈ ಒಂಟಿ ಸಲಗ ಸಕಲೇಶಪುರದಲ್ಲಿ ಇತ್ತೀಚಿಗೆ ಕಂಡು ಬಂದಿತ್ತು.