ಬೆಂಗಳೂರು: ಯುವತಿ ವಿಚಾರಕ್ಕೆ ಸ್ನೇಹಿತರ ಮಧ್ಯೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಡೆದಿದೆ.
ನೆಲಮಂಗಲ ತಾಲ್ಲೂಕಿನ ಗೊಲ್ಲಹಳ್ಳಿ ಬಳಿ ಈ ಘಟನೆ ನಡೆದಿದೆ. ಪಾರ್ಟಿ ಮಾಡಲು ಕರೆದುಕೊಂಡು ಹೋಗಿ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ ಎನ್ನಲಾಗಿದೆ. 24 ವರ್ಷದ ದರ್ಶನ್ ಕೊಲೆಯಾಗಿದ್ದು, ವೇಣುಗೋಪಾಲ್ ಕೊಲೆ ಆರೋಪಿ ಎನ್ನಲಾಗಿದೆ.
ಮೇಲ್ನೋಟಕ್ಕೆ ಇಬ್ಬರು ಒಂದೆ ಹುಡುಗಿಯನ್ನು ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಹೀಗಾಗಿ ಇಬ್ಬರ ಮಧ್ಯೆ ಗಲಾಟೆ ಶುರುವಾಗಿ ಕೊಲೆಯಲ್ಲಿ ಅಂತ್ಯವಾಗಿದೆ. ಈ ಕುರಿತು ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ಎಸ್ಪಿ ಸಿ.ಕೆ. ಬಾಬಾ ಮಾತನಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾತ್ರಿ 9:30ರ ವೇಳೆ ರೈಲ್ವೆಗೊಲ್ಲಹಳ್ಳಿ ಬಳಿ ಈ ಘಟನೆ ನಡೆದಿದೆ. 26 ವರ್ಷದ ದರ್ಶನ್ ಕೊಲೆಯಾಗಿರುವ ವ್ಯಕ್ತಿ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ತೋಟದ ಮನೆಯಲ್ಲಿ ಘಟನೆ ನಡೆದಿದೆ. ಯುವತಿಯ ಹಳೇ ಪ್ರೇಮಿ ಕೊಲೆ ಮಾಡಿದ್ದಾನೆ.
ತೋಟದ ಮನೆಯಲ್ಲಿ ಮಾತಿಗೆ ಮಾತು ಬೆಳೆದು ಗಲಾಟೆ ಆಗಿದೆ. ನಂತರ ಚುಚ್ಚಿ ಕೊಲೆ ಮಾಡಿದ್ದಾನೆ. ಕೊಲೆ ಯಾರು ಮಾಡಿದ್ದಾರೆ ಎಂಬುವುದರ ಕುರಿತು ನಮಗೆ ಮಾಹಿತಿ ಇದೆ. ಈಗಾಗಲೇ ಒಂದು ತಂಡ ರಚನೆ ಮಾಡಿದ್ದೇವೆ. ಕೆಲವೇ ಗಂಟೆಗಳಲ್ಲಿ ಆತನನ್ನು ಬಂಧಿಸುತ್ತೇವೆ. ನನ್ನ ಜೊತೆಯಲ್ಲಿ ಇದ್ದು, ಈಗ ಬೇರೊಬ್ಬನ ಜೊತೆಯಲ್ಲಿ ಇದ್ದಾಳೆ ಎಂದು ಕೊಲೆ ಮಾಡಿದ್ದಾನೆ ಎಂದಿದ್ದಾರೆ.
ಯುವತಿ ಹೊಸ ಲವರ್ ಜೊತೆ ಮದುವೆ ಮಾಡಿಕೊಳ್ಳಲು ಮುಂದಾಗಿದ್ದಳು. ಮದುವೆಗೆ ಅವರ ಪೋಷಕರ ಒಪ್ಪಿಗೆ ಕೂಡ ಇತ್ತು. ಬೇರೊಬ್ಬನ ಜೊತೆ ಸಂಪರ್ಕದಲ್ಲಿ ಇದ್ದದ್ದೇ ಕೊಲೆಗೆ ಮೂಲ ಕಾರಣ ಎಂದು ಹೇಳಿದ್ದಾರೆ.