ದೇವನಹಳ್ಳಿ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದಲ್ಲಿ ಕೇರಳ ಮೂಲದ ವಿದ್ಯಾರ್ಥಿಗಳ ಉಪಟಳ ಹೆಚ್ಚಾಗಿದೆ ಎಂಬ ಆರೋಪ ಸ್ಥಳೀಯರಿಂದ ಕೇಳಿಬಂದಿದೆ. ಖಾಸಗಿ ಕಾಲೇಜಿನಲ್ಲಿ ಓದುತ್ತಿರುವ ಕೆಲವು ವಿದ್ಯಾರ್ಥಿಗಳು ಗ್ಯಾಂಗ್ಗಳಾಗಿ ಗುಂಪು ಸೇರಿ ರೌಡಿಗಳಂತೆ ವರ್ತಿಸುತ್ತಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಕಾಲೇಜಿನಲ್ಲಿ ನಡೆದ ಕಿತ್ತಾಟದ ನಂತರ ವಿದ್ಯಾರ್ಥಿಗಳು ಗ್ಯಾಂಗ್ ಸಮೇತವಾಗಿ ರಾತ್ರಿ ವೇಳೆ ಮನೆಗಳ ಬಳಿ ಬಂದು ರಂಪಾಟ ನಡೆಸಿರುವ ಘಟನೆಗಳು ನಡೆದಿವೆ ಎನ್ನಲಾಗಿದೆ. ಮತ್ತೊಂದು ಗ್ಯಾಂಗ್ಗೆ ವಾರ್ನಿಂಗ್ ನೀಡಲು ರಾತ್ರಿ ವೇಳೆ ಗುಂಪು ಸೇರಿ ಬಂದಿದ್ದು, ಎರಡು ಗ್ಯಾಂಗ್ಗಳ ನಡುವೆ ಬಡಿದಾಟವೂ ನಡೆದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ರೌಡಿಗಳಂತೆ ವರ್ತಿಸುವ ವಿದ್ಯಾರ್ಥಿಗಳ ನಡೆಗೆ ಸ್ಥಳೀಯರು ಭಯಭೀತರಾಗಿದ್ದು, ವಿದ್ಯಾರ್ಥಿಗಳು ವಾಸವಾಗಿರುವ ಕೆಲವು ಮನೆಗಳು ಮಿನಿ ಬಾರ್ನಂತಾಗಿವೆ ಎಂಬ ಆರೋಪವೂ ಕೇಳಿಬಂದಿದೆ. ಇದರಿಂದಾಗಿ ದೇವನಹಳ್ಳಿ ಪಟ್ಟಣದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಪುಡಿ ರೌಡಿಗಳಂತೆ ವರ್ತಿಸುತ್ತಿರುವ ವಿದ್ಯಾರ್ಥಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಪೊಲೀಸ್ ಇಲಾಖೆಗೆ ಆಗ್ರಹಿಸಿದ್ದಾರೆ. ಈ ಘಟನೆ ದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇದನ್ನೂ ಓದಿ : ನಿಮ್ಮವರ ನೋವುಗಳು.. ಉಳಿದವರ ರೋದನೆ.. ಪ್ರಿಯಾಂಕ್ ಖರ್ಗೆ ಏನ್ ಹೇಳ್ತೀರಿ?



















