ಲಾಪ್ತಾ ಲೇಡೀಸ್ ಮೂಲಕ ಜನಪ್ರಿಯತೆ ಗಳಿಸಿದ್ದ ನಟಿ ಛಾಯಾ ಕದಮ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ರೇಡಿಯೋ ಸಂದರ್ಶನವೊಂದರಲ್ಲಿ ಭಾಗಿ ಆಗಿದ್ದ ನಟಿ ಛಾಯಾ ಕದಮ್ ಆಹಾರದ ವಿಷಯ ಚರ್ಚೆಗೆ ಬಂದಾಗ ತಾವು ಹಲವು ರೀತಿಯ ಮಾಂಸಾಹಾರ ತಿಂದಿರುವುದಾಗಿ ಹೇಳಿದ್ದರು. ಕೆಲವು ಪ್ರಾಣಿಗಳ ಹೆಸರು ಹೇಳಿ ಆ ಪ್ರಾಣಿಗಳ ಮಾಂಸದಿಂದ ತಯಾರಿಸಿದ ಖಾದ್ಯಗಳನ್ನು ತಿಂದಿರುವುದಾಗಿ ನಟಿ ಹೇಳಿದ್ದರು. ಹೀಗಾಗಿ ಅವರ ವಿರುದ್ಧ ದೂರು ದಾಖಲಾಗಿದೆ.
ಮಹಾರಾಷ್ಟ್ರ ಅರಣ್ಯ ಇಲಾಖೆ ಸಿಬ್ಬಂದಿ ನಟಿಯ ವಿರುದ್ಧ ದೂರು ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಇನ್ನು ಮುಂಬೈನಲ್ಲಿ ಜನಿಸಿದ ನಟಿ ಛಾಯಾ ಕದಮ್, ಮರಾಠಿ ಮತ್ತು ಹಿಂದಿ ಸಿನಿಮಾ ಎರಡರಲ್ಲೂ ತಮ್ಮ ಪ್ರಭಾವಶಾಲಿ ಪಾತ್ರಗಳಿಗೆ ಹೆಸರು ವಾಸಿಯಾಗಿದ್ದಾರೆ. ‘ಸೈರಾತ್’, ‘ಫ್ಯಾಂಡ್ರಿ’, ‘ನ್ಯೂಡ್’ ಮತ್ತು ‘ಅಂಧಾಧುನ್’ ನಂತಹ ಚಿತ್ರಗಳಲ್ಲಿ ಅಸಾಧಾರಣ ಅಭಿನಯ ನೀಡುವ ಮೂಲಕ ಕದಮ್ ಪ್ರಾಮುಖ್ಯತೆ ಪಡೆದಿದ್ದಾರೆ. ಕಿರಣ್ ರಾವ್ ಅವರ ‘ಲಾಪತಾ ಲೇಡೀಸ್’ ಚಿತ್ರದಲ್ಲಿ ಮಂಜು ಮಾಯ್ ಪಾತ್ರದಲ್ಲಿ ಅವರು ವ್ಯಾಪಕ ಮನ್ನಣೆ ಗಳಿಸಿದ್ದರು. ಕುನಾಲ್ ಖೇಮು ಅವರ ‘ಮಡ್ಗಾಂವ್ ಎಕ್ಸ್ಪ್ರೆಸ್’ ಚಿತ್ರದಲ್ಲಿ ಕಾಂಚನ್ ಕೊಂಬ್ಡಿ ಪಾತ್ರದಲ್ಲಿ ಡಾರ್ಕ್ ಕಾಮಿಡಿಯಲ್ಲಿ ತಮ್ಮ ಬಹುಮುಖ ಪ್ರತಿಭೆಯನ್ನು ಪ್ರದರ್ಶಿಸಿದ್ದರು.