ಮಂಡ್ಯ: ಮಂಡ್ಯ ತಾಲೂಕಿನ ಹೊನಗನಹಳ್ಳಿ ಮಠ(Honaganahalli Matha) ಗ್ರಾಮದಲ್ಲಿ ಮನೆಯ ಮುಂದೆ ಆಟವಾಡುತ್ತಿದ್ದ ಮಗು ನಾಲೆಯಲ್ಲಿ ಕೊಚ್ಚಿ ಹೋಗಿರುವ ಘಟನೆ ನಡೆದಿದೆ.
ವಿಶ್ವೇಶ್ವರಯ್ಯ ನಾಲೆಯಲ್ಲಿ 4 ವರ್ಷದ ಮಗು ಕೊಚ್ಚಿ ಹೋಗಿದೆ ಎನ್ನಲಾಗುತ್ತಿದೆ. ಕೆಆರ್ಎಸ್(KRS) ಜಲಾಶಯದಿಂದ ನಾಲೆಗೆ ನೀರು ಹರಿಸಲಾಗುತ್ತಿದ್ದು, ರಾಜು ಹಾಗೂ ಕಸ್ತೂರಿ ದಂಪತಿಯ ಪುತ್ರ ಸಬಿನ್(4) ಕೊಚ್ಚಿ ಹೋಗಿದ್ದಾನೆ. ಅಂಗನವಾಡಿಯಿಂದ ಆಗ ತಾನೆ ಬಂದು ಮನೆಯ ಮುಂದೆ ಬಂದು ಆಟವಾಡುತ್ತಿದ್ದಾಗ ಈ ಘಟನೆ ನಡೆದಿದೆ.
ಮಗು ನಾಪತ್ತೆಯಾಗುತ್ತಿದ್ದಂತೆ ಪೋಷಕರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಮನೆ ಪಕ್ಕದಲ್ಲೇ ಇರುವ ವಿಶ್ವೇಶ್ವರಯ್ಯ ನಾಲೆ ಬಳಿ ಸಬಿನ್ ಚಪ್ಪಲಿ ಪತ್ತೆಯಾಗಿದೆ. ಆಟವಾಡುವಾಗ ಆಯತಪ್ಪಿ ಬಿದ್ದಿರುವ ಶಂಕೆ ವ್ಯಕ್ತವಾಗುತ್ತಿದೆ. ಕುಟುಂಬ ಸದಸ್ಯರು ಸೇರಿಕೊಂಡು ಮಗು ಸಬಿನ್ಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ. ಮಗು ಪತ್ತೆಗಾಗಿ ನೀರು ನಿಲ್ಲಿಸುವಂತೆ ಮನವಿ ಮಾಡಿದರೂ ನೀರು ನಿಲ್ಲಿಸದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ತುಂಬಿ ಹರಿಯುತ್ತಿರುವ ವಿಸಿ ನಾಲೆಯಲ್ಲಿ ಮಗು ಕೊಚ್ಚಿಹೋಗಿರಬಹುದು ಎನ್ನಲಾಗುತ್ತಿದೆ.
ನಾಲೆಗಳ ಕಾಮಗಾರಿ ಹಿನ್ನೆಲೆಯಲ್ಲಿ ಕಳೆದ ಆರು ತಿಂಗಳಿಂದ ನಾಲೆಗೆ ನೀರನ್ನ ಸಹ ಹರಿಸಿಲಿಲ್ಲ. ಹೀಗಾಗಿ ಜಿಲ್ಲೆಯ ರೈತರು ಹೋರಾಟ ಮಾಡಿ ನಾಲೆಗಳಿಗೆ ನೀರು ಹರಿಸುವಂತೆ ಮನವಿ ಮಾಡಿದ್ರು. ಜಲಾಶಯ ನೂರು ಅಡಿ ದಾಟಿದ ಮೇಲೆ ನೀರು ಹರಿಸುವುದಾಗಿ ರಾಜ್ಯ ಸರ್ಕಾರ ತಿಳಿಸಿತ್ತು. ಇದೀಗ ಜಲಾಶಯ ನೂರು ಅಡಿ ದಾಟಿರುವ ಹಿನ್ನೆಲೆಯಲ್ಲಿ ನಿನ್ನೆಯಿಂದ ನಾಲೆಗಳಿಗೆ ನೀರನ್ನ ಹರಿಸಲಾಗಿದೆ. ಮಗು ಕಾಣೆಯಾಗಿದೆ.