ಬೆಂಗಳೂರು: ರಸ್ತೆಯಲ್ಲಿ ಸಂಚರಿಸುತ್ತಿದ್ದ ಸಾಕು ನಾಯಿ (Dog) ಮೇಲೆ ಕಾರೊಂದು ಹರಿದು ಹೋಗಿದ್ದು, ಈ ಅಮಾನವೀಯ ಕೃತ್ಯ ಸಿಸಿಟಿವಿಯಲ್ಲಿ (CCTV) ಸೆರೆಯಾಗಿದೆ.
ಸಿಲಿಕಾನ್ ಸಿಟಿಯಲ್ಲಿನ ಯಲಹಂಕದ ಮಾರುತಿ ನಗರದಲ್ಲಿ ಜುಲೈ 31 ರಂದು ರಸ್ತೆಯಲ್ಲಿ ಓಡಾಡುತ್ತಿದ್ದ ಸಾಕು ನಾಯಿಯ ಮೇಲೆ ಚಾಲಕನೊಬ್ಬ ಕಾರು ಹರಿಸಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ನಾಯಿ ಮಾಲೀಕ ದೂರು ನೀಡಿದ್ದು ಕಾರು ಚಾಲಕ ಕ್ಷಮೆ ಕೇಳಿದ್ದಾನೆ. ಆದರೆ, ಕಾರು ಚಾಲಕ ಮಾನವೀಯತೆ ಮರೆತು ವರ್ತಿಸಿದ್ದಾನೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಬೆಂಗಳೂರು ನಗರ ಜಿಲ್ಲೆ ಯಲಹಂಕದ ಮಾರುತಿ ನಗರ 17 ನೇ ಕ್ರಾಸ್ ನಲ್ಲಿ ಜುಲೈ 31ರಂದು ಸಾಕು ನಾಯಿ ಮೇಲೆ ಕಾರು ಹರಿದಿತ್ತು. ಕಾರು ಚಾಲಕ ಸ್ವಲ್ಪವೂ ಮಾನವೀಯತೆ ತೋರದೆ ನಾಯಿಯ ಮೇಲೆ ಕಾರು ಹತ್ತಿಸಿ ಕಾರನ್ನು ನಿಲ್ಲಿಸದೇ ಹೋಗಿದ್ದ. ನಾಲ್ಕು ದಿನಗಳ ನಂತರ ಚಿಕಿತ್ಸೆ ಫಲಕಾರಿಯಾಗದೆ ನಾಯಿ ಸಾವನ್ನಪಿದೆ. ನಾಯಿ ಸಾವಿನ ಬಳಿಕ ಮಾಲೀಕ ಸಿಸಿ ಕ್ಯಾಮರಾ ಚೆಕ್ ಮಾಡಿದ್ದು ನಾಯಿ ಮೇಲೆ ಕ್ಯಾಬ್ ಹರಿದಿರುವ ದೃಶ್ಯ ಪತ್ತೆಯಾಗಿತ್ತು. ಇದರಿಂದ ಆಕ್ರೋಶಗೊಂಡು ದೂರು ದಾಖಲಿಸಿದ್ದಾರೆ. ದೂರು ನೀಡುತ್ತಿದ್ದಂತೆ ಕಾರು ಚಾಲಕ ನಾಯಿ ಮಾಲೀಕರ ಬಳಿ ಬಂದು ಕ್ಷಮೆ ಕೋರಿದ್ದಾರೆ. ಆಗ ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ. ಕಾರು ಹತ್ತಿದಾಗಲೇ ಕಾರು ನಿಲ್ಲಿಸಿ ಚಿಕಿತ್ಸೆ ನೀಡಿದ್ದರೆ ನಾಯಿ ಮರಿ ಉಳಿಯುತ್ತಿತ್ತು ಎಂದು ಮಾಲೀಕರು ಆಕ್ರೋಶ ಹೊರ ಹಾಕಿದ್ದಾರೆ.