ಏಪ್ರಿಲ್ 22…ಭಾರತ ಎಂದೂ ಮರೆಯದ ಕರಾಳ ಘಟನೆಯೊಂದು ಪಹಲ್ಗಾಮ್ ನಲ್ಲಿ ನಡೆದಿತ್ತು. 26 ಅಮಾಯಕ ಪ್ರವಾಸಿಗರನ್ನು ಬರ್ಬರವಾಗಿ, ಅಮಾನುಷವಾಗಿ ಮತ್ತು ಅಷ್ಟೇ ನಿರ್ದಯವಾಗಿ ಹತ್ಯೆ ಮಾಡಲಾಗಿತ್ತು. ಇದು ಭಾರತದ ಆತ್ಮಸ್ಥೈರ್ಯ, ತಾಳ್ಮೆ, ಶಾಂತಿಯನ್ನೇ ಅಣುಕ ಮಾಡಿದಂತಿತ್ತು. ಆದರೆ, ಕೈಕಟ್ಟಿ ಕೂರುವ ಜಾಯಮಾನ ನಮ್ಮದಲ್ಲ. ಇದು ಬದಲಾಗಿರುವ ಭಾರತದ ತಿರುಗೇಟು ಅಂತಲೇ ಪ್ರಧಾನಿ ಹೇಳುತ್ತಲೇ ಬಂದಿದ್ದಾರೆ.
ಆದರೆ, ಈವರೆಗೂ ದೊಡ್ದದೊಂದು ಸದ್ದು ಕೇಳಿಲ್ಲ. ಹಾಗಂತಾ ಕುರಿಯನ್ನು ಬಲಿಕೊಡುವ ಮುನ್ನ ಕೊಬ್ಬಿಸುವಂಥಾ ಕಾರ್ಯ ಸದ್ದಿಲ್ಲದೆ ನಡೆದಿದೆ. ಅದರಲ್ಲೂ ಒಂದೆಡೆ ನಾಳೆ ಅಣಕು ಯುದ್ಧ ಡ್ರಿಲ್ ಗೆ ಸೂಚಿಸಿರುವ ಬೆನ್ನಲ್ಲೇ ಪಿಎಂ ಮೋದಿ ಸಾಲ ಸಾಲು ಸಭೆ ನಡೆಸಿ ಪ್ರತೀಕಾರದ ಯೋಜನೆಗೆ ಅಂತಿಮ ರೂಪ ನೀಡಿದಂತಿತ್ತು.
ರಾಷ್ಟ್ರೀಯ ಭದ್ರತಾ ಸಲಹೆಗಾರ ದೋವಲ್ ಜೊತೆ ಪ್ಲ್ಯಾನ್
ದೆಹಲಿಯ ಪ್ರಧಾನ ಮಂತ್ರಿ ಕಚೇರಿ ನಿನ್ನೆ ಅತ್ಯಂತ ಹೈವೋಲ್ಟೇಜ್ ಬೆಳವಣಿಗೆಗಳಿಗೆ ಸಾಕ್ಷಿಯಾಗಿದೆ. ಒಂದಲ್ಲಾ ಎರಡಲ್ಲಾ ಸಾಲು ಸಾಲು ಸಭೆಗಳನ್ನು ಪ್ರಧಾನಿ ನಡೆಸಿದ್ದಾರೆ. ಅದರಲ್ಲೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಾಲ್ ರೊಂದಿಗೆ ನಮೋ 40 ನಿಮಿಷಕ್ಕೂ ಹೆಚ್ಚು ಕಾಲ ಮೀಟಿಂಗ್ ಮಾಡಿದ್ದಾರೆ. ಪಾಕಿಸ್ಥಾನದಲ್ಲೇ ಅಂಡರ್ ಕವರ್ ಏಜೆಂಟ್ ಆಗಿದ್ದ ದೋವಾಲ್, ಮುಂದಿನ ನಡೆಗಳ ಬಗ್ಗೆ ಪ್ರಧಾನಿಗೆ ವಿವರಣೆ ನೀಡಿದ್ದಾರೆ.
ಭಾರತದ ಪ್ರತೀಕಾರದ ಸಮರಕ್ಕೆ ಕೈಜೋಡಿಸಿದ ರಷ್ಯಾ
ಒಂದೆಡೆ ಸರಣಿ ಸಭೆಗಳು ನಡೆದಿರುವಾಗಲೇ ಪ್ರಧಾನಿ ಮೋದಿಗೆ ರಷ್ಯಾದಿಂದ ಕರೆ ಬಂದಿದೆ. ರಷ್ಯಾ ಅಧ್ಯಕ್ಷ ಲ್ಯಾಡಿಮಿರ್ ಪುಟಿನ್, ಪಹಲ್ಗಾಮ್ ದಾಳಿಯನ್ನು ಖಂಡಿಸಿದ್ದಾರೆ. ಈ ಬಗ್ಗೆ ಮೋದಿ ಜೊತೆ ವಿಸ್ತೃತವಾಗಿ ಚರ್ಚಿಸಿದ ಪುಟಿನ್, ಪಾಕ್ ಮಟ್ಟಹಾಕಲು ಅಗತ್ಯವಿರುವ ಎಲ್ಲ ನೆರವನ್ನು ನೀಡುವುದಾಗಿ ಘೋಷಿಸಿದ್ದಾರೆ. ಇತ್ತ ಇಸ್ರೇಲ್ ಹಾಗೂ ಜಪಾನ್ ಕೂಡಾ ಭಾರತದ ಬೆನ್ನಿಗೆ ನಿಂತಿವೆ.
ಪಾಕಿಸ್ತಾನ ವಿರುದ್ಧ ಜಲಾಸ್ತ್ರ ಪ್ರಯೋಗಿಸಿದ ಭಾರತ
ಪಾಕಿಸ್ತಾನವನ್ನು ಹನಿ ಹನಿ ನೀರಿಗೂ ವಿಲವಿಲ ಎನ್ನುವಂತೆ ಮಾಡುವ ಯೋಜನೆ ರೂಪಿಸಿರುವ ಭಾರತ ಜಲಾಶಯಗಳ ನೀರಿನ ಸಂಗ್ರಹ ಮಟ್ಟವನ್ನು ಹೆಚ್ಚಿಸುವ ಯೋಜನೆ ರೂಪಿಸಿದೆ. ಇದಕ್ಕಾಗಿ 6 ಹೊಸ ವಿದ್ಯುತ್ ಯೋಜನೆಗಳ ನಿರ್ಮಾಣ ಕಾರ್ಯಕ್ಕೀಗ ಚುರುಕು ನೀಡಲಾಗಿದೆ. ಕಾಶ್ಮೀರದ ಸಲಾಲ್ ಮತ್ತು ಬಗ್ಲಿಹಾರ್ ಜಲವಿದ್ಯುತ್ ಯೋಜನೆಗೆ ರೂಪಿಸಿರುವ ಡ್ಯಾಂಗಳ ನೀರಿನ ಸಂಗ್ರಹಮಟ್ಟವನ್ನು ಇಮ್ಮಡಿಗೊಳಸಲಾಗುತ್ತಿದೆ. ಇದಕ್ಕಾಗಿ ಜಲಾಶಯಗಳ ಹೂಳು, ಕೆಸರನ್ನು ಹೊರಹಾಕುವ ಕೆಲಸ ಆರಂಭವಾಗಿದೆ.