ಮಂಡ್ಯ : ಇಂದು ಮಂಡ್ಯದ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ನಡೆದ ‘ದಿಶಾ’ ಸಭೆಗೆ ಆಗಮಿಸಿದ್ದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಮುಂದೆ ವ್ಯಕ್ತಿಯೊಬ್ಬರು ತಮ್ಮ ಪತ್ನಿ ಹಾಗೂ ಜೆಡಿಎಸ್ ಮಾಜಿ ಶಾಸಕರ ವಿರುದ್ಧ ಅಕ್ರಮ ಸಂಬಂಧದ ಗಂಭೀರ ಆರೋಪ ಮಾಡಿ, ನ್ಯಾಯಕ್ಕಾಗಿ ಮಂಡಿಯೂರಿ ಗೋಳಾಡಿದ ಘಟನೆ ನಡೆದಿದೆ.
ಮಳವಳ್ಳಿ ತಾಲ್ಲೂಕಿನ ಪ್ರಸನ್ನ ಕುಮಾರ್ ಎಂಬುವವರು ಆರೋಪ ಮಾಡಿದ ವ್ಯಕ್ತಿ. ಮಳವಳ್ಳಿಯ ಮಾಜಿ ಶಾಸಕ ಡಾ. ಕೆ.ಅನ್ನದಾನಿ ಅವರು ತಮ್ಮ ಪತ್ನಿ ವಿಜಯಲಕ್ಷ್ಮಿ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಪ್ರಸನ್ನ ಕುಮಾರ್ ಕೇಂದ್ರ ಸಚಿವರ ಮುಂದೆ ದೂರು ನೀಡಿದ್ದಾರೆ. ಸಭೆ ಮುಗಿಸಿ ಹೊರಬಂದ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಕಾಲಿಗೆ ಬಿದ್ದ ಪ್ರಸನ್ನ, “ನನಗೆ ನ್ಯಾಯ ಕೊಡಿಸಿ ಅಣ್ಣ” ಎಂದು ಕಣ್ಣೀರಿಟ್ಟಿದ್ದಾರೆ.
ಮಾಧ್ಯಮಗಳ ಮುಂದೆಯೂ ತಮ್ಮ ಅಳಲು ತೋಡಿಕೊಂಡ ಪ್ರಸನ್ನ ಕುಮಾರ್, ಮಾಜಿ ಶಾಸಕರ ವಿರುದ್ಧ ಸಾಲು ಸಾಲು ಆರೋಪಗಳನ್ನು ಮಾಡಿದ್ದಾರೆ. “ನನ್ನ ಪತ್ನಿಗಾಗಿ ಅನ್ನದಾನಿ ಅವರು ಮೈಸೂರಿನಲ್ಲಿ ಒಂದೂವರೆ ಕೋಟಿ ರೂಪಾಯಿ ಬೆಲೆಬಾಳುವ ಅಪಾರ್ಟ್ಮೆಂಟ್ ಕೊಡಿಸಿದ್ದಾರೆ. ರಾತ್ರಿಯಾಗುತ್ತಲೇ ಮಾಜಿ ಶಾಸಕರು ಅಲ್ಲಿಗೆ ಹೋಗುತ್ತಾರೆ,” ಎಂದು ಆರೋಪಿಸಿದ್ದಾರೆ.
ಪತ್ನಿ ಹಾಗೂ ಅನ್ನದಾನಿ ಅವರು ಪ್ರತಿದಿನ ಗಂಟೆಗಟ್ಟಲೆ ಫೋನ್ನಲ್ಲಿ ಮಾತನಾಡುತ್ತಾರೆ. ಈ ಬಗ್ಗೆ ಪ್ರಶ್ನಿಸಿದರೆ ನನಗೆ ಬೆದರಿಕೆ ಹಾಕುತ್ತಾರೆ ಎಂದು ದೂರಿದ್ದಾರೆ. ಇನ್ನೊಬ್ಬನ ಜೊತೆ ಇರುವ ಪತ್ನಿಯ ಜೊತೆ ಸಂಸಾರ ಮಾಡಲು ಸಾಧ್ಯವಿಲ್ಲ. ವಿಚ್ಛೇದನ ಕೇಳಿದರೆ ಕೊಡುತ್ತಿಲ್ಲ. ಬದಲಿಗೆ 30 ಲಕ್ಷ ರೂಪಾಯಿ ಹಣ ನೀಡಿದರೆ ಮಾತ್ರ ಡೈವೋರ್ಸ್ ನೀಡುವುದಾಗಿ ಪತ್ನಿ ಪಟ್ಟು ಹಿಡಿದಿದ್ದಾಳೆ,” ಎಂದು ಪ್ರಸನ್ನ ಅಳಲು ತೋಡಿಕೊಂಡಿದ್ದಾರೆ.
ಪ್ರಸನ್ನ ಕುಮಾರ್ ಅವರ ಅಳಲನ್ನು ಆಲಿಸಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಈ ಬಗ್ಗೆ ಈಗಲೇ ಏನೂ ಹೇಳಲು ಸಾಧ್ಯವಿಲ್ಲ. ದಿಶಾ ಸಭೆ ಮುಗಿದ ಬಳಿಕ ಈ ವಿಚಾರವಾಗಿ ಚರ್ಚಿಸಿ, ನಿಮಗೆ ನ್ಯಾಯ ಕೊಡಿಸುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿ ಅಲ್ಲಿಂದ ತೆರಳಿದ್ದಾರೆ. ತಮ್ಮ ಪಕ್ಷದ ಮಾಜಿ ಶಾಸಕರ ವಿರುದ್ಧವೇ ಸ್ವಪಕ್ಷದ ನಾಯಕರ ಮುಂದೆ ಇಂತಹ ಗಂಭೀರ ಆರೋಪ ಕೇಳಿಬಂದಿರುವುದು ರಾಜಕೀಯ ವಲಯದಲ್ಲಿ ಸದ್ಯ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ : ‘ಅಯ್ಯರ್ ಶೀಘ್ರದಲ್ಲೇ ಟೀಮ್ ಇಂಡಿಯಾ ಕ್ಯಾಪ್ಟನ್’ – ಪಂಜಾಬ್ ನಾಯಕನಿಗೆ ಕನ್ನಡಿಗ ವೈಶಾಕ್ ವಿಜಯ್ ಬೆಂಬಲ!



















