ಬೆಂಗಳೂರು : ಯುವಜನರ ವಿದೇಶ ಪ್ರವಾಸದ ನೆಪದಲ್ಲಿ ಮಾದಕ ವಸ್ತು ಮಾರಾಟ, ಮಾನವ ಕಳ್ಳಸಾಗಣೆ ಹಾಗೂ ಲೈಂಗಿಕ ಶೋಷಣೆ ನಡೆಯುತ್ತಿರುವ ಬಗ್ಗೆ ತುರ್ತು ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಪೊಲೀಸ್ ಆಯುಕ್ತರಿಗೆ ದಿನೇಶ್ ಕಲ್ಲಹಳ್ಳಿ ಪತ್ರದ ಮೂಲಕ ಮನವಿ ಮಾಡಿದ್ದಾರೆ.

ಕನ್ನಡ ಖಾಸಗಿ ದೂರದರ್ಶನದ ರಿಯಾಲಿಟಿ ಕಾರ್ಯಕ್ರಮದ ಮೂಲಕ ಸಾರ್ವಜನಿಕವಾಗಿ ಪರಿಚಿತರಾಗಿರುವ ಮಸ್ತಾನ್ ಚಂದ್ರ ಎಂಬ ವ್ಯಕ್ತಿಯ ಚಟುವಟಿಕೆಗಳ ಬಗ್ಗೆ ಹಲವು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಮಸ್ತಾನ್ ಚಂದ್ರ ಈ ಹಿಂದೆ ಮಾದಕ ವಸ್ತುಗಳ ಸೇವನೆ ಮತ್ತು ಮಾರಾಟ ಸಂಬಂಧಿತ ಪ್ರಕರಣಗಳಲ್ಲಿ ಬೆಂಗಳೂರು ನಗರದ ಗೋವಿಂದಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಂಧಿತರಾಗಿದ್ದ ದಾಖಲೆಗಳಿವೆ ಎಂಬ ಮಾಹಿತಿಯೂ ಉಲ್ಲೆಖಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ, ಕಾರ್ಯಕ್ರಮಗಳು, ಮನರಂಜನೆ, ಉದ್ಯೋಗಾವಕಾಶ ಮತ್ತು ವಿದೇಶ ಪ್ರವಾಸಗಳ ನೆಪದಲ್ಲಿ ಯುವತಿಯರು ಹಾಗೂ ಯುವಕರನ್ನು ಸಂಘಟಿತವಾಗಿ ವಿದೇಶಗಳಿಗೆ ಕರೆದೊಯ್ಯಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ, ವಿಡಿಯೋ ಸೇರಿದಂತೆ ಹಲವು ದೃಶ್ಯ ದಾಖಲೆಗಳು ಲಭ್ಯವಿರುವುದಾಗಿ ಹೇಳಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಕೆಲ ನಟಿಯರು, ಕಿರುತೆರೆ ಕಲಾವಿದರು, ಯುವತಿಯರು ಮತ್ತು ಯುವಕರ ತಂಡಗಳನ್ನು ಕೀನ್ಯಾ, ವಿಯೆಟ್ನಾಂ ಮತ್ತು ಥೈಲ್ಯಾಂಡ್ಗೆ ಕರೆದೊಯ್ಯಲಾಗುತ್ತಿರುವುದು ಕಂಡುಬಂದಿದೆ. ಈ ತಂಡವು ಡಿಸೆಂಬರ್ 11, 12 ಮತ್ತು 13, 2025ರಂದು ವಿಯೆಟ್ನಾಂ ಪ್ರವಾಸ ಕೈಗೊಂಡಿರುವುದಾಗಿ ತಿಳಿದುಬಂದಿದೆ.
ಇತ್ತೀಚೆಗೆ ಹರಿದಾಡಿರುವ ಒಂದು ವಿಡಿಯೋದಲ್ಲಿ ಕನ್ನಡದ ನಟಿ ರಾಗಿಣಿ ದ್ವಿವೇದಿ ಅವರು ನೈರೋಬಿಗೆ ಬರುವಂತೆ ಆಹ್ವಾನ ನೀಡುತ್ತಿರುವ ದೃಶ್ಯಗಳು ಕಾಣಿಸಿಕೊಂಡಿದ್ದು, ಇದರಿಂದ ಪೋಷಕರಲ್ಲಿ ಗಂಭೀರ ಆತಂಕ ಮೂಡಿದೆ. ಈ ವಿದೇಶ ಪ್ರವಾಸಗಳು ಮಾದಕ ವಸ್ತು ಜಾಲ, ಲೈಂಗಿಕ ಶೋಷಣೆ, ಮಾನವ ಕಳ್ಳಸಾಗಣೆ ಅಥವಾ ಇತರೆ ಅಕ್ರಮ ಚಟುವಟಿಕೆಗಳೊಂದಿಗೆ ನಂಟು ಹೊಂದಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಒಬ್ಬ ಪೋಷಕರು ತಮ್ಮ ಮಗಳು ಈ ತಂಡದೊಂದಿಗೆ ವಿದೇಶ ಪ್ರವಾಸಕ್ಕೆ ತೆರಳಿರುವುದಾಗಿ ತಿಳಿಸಿ, ಆಕೆಯ ಸುರಕ್ಷತೆ ಹಾಗೂ ದುರ್ಬಳಕೆಯ ಸಾಧ್ಯತೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ ಕುಟುಂಬದ ಗೌರವ, ಸಾಮಾಜಿಕ ಮರ್ಯಾದೆ ಹಾಗೂ ಭೀತಿಯ ಕಾರಣದಿಂದ ಅವರು ತಮ್ಮ ಗುರುತನ್ನು ಬಹಿರಂಗಪಡಿಸಲು ಹಿಂಜರಿಯುತ್ತಿರುವುದಾಗಿ ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಎಲ್ಲ ಅಂಶಗಳನ್ನು ಪರಿಗಣಿಸಿ, ಮಾದಕ ವಸ್ತು ನಿಯಂತ್ರಣ ಕಾಯ್ದೆ, ಮಾನವ ಕಳ್ಳಸಾಗಣೆ ಹಾಗೂ ಲೈಂಗಿಕ ಶೋಷಣೆ ತಡೆ ಕಾಯ್ದೆ, ಅಪ್ರಾಪ್ತ ಮಕ್ಕಳ ರಕ್ಷಣೆ ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಸಮಗ್ರ ತನಿಖೆ ನಡೆಸಬೇಕೆಂದು ಮನವಿದಾರರು ಆಗ್ರಹಿಸಿದ್ದಾರೆ.
ಸಂಶಯಾಸ್ಪದ ವಿದೇಶ ಪ್ರವಾಸಗಳ ಸಂಘಟನೆ, ಭಾಗಿಯಾಗಿರುವವರ ಪಾಸ್ಪೋರ್ಟ್ ಮತ್ತು ವೀಸಾ ದಾಖಲೆಗಳು, ಹಣಕಾಸು ವಹಿವಾಟುಗಳು, ಡಿಜಿಟಲ್ ಸಂವಹನಗಳು ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ನಡೆದಿರುವ ಪ್ರಚಾರದ ಮೂಲಗಳ ಬಗ್ಗೆ ತಾಂತ್ರಿಕ ಹಾಗೂ ಸಾಕ್ಷ್ಯಾಧಾರಿತ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಪತ್ರದ ಮೂಲಕ ಕೋರಿದ್ದಾರೆ.
ಇದನ್ನೂ ಓದಿ : ಜಿಬಿಎ ಚುನಾವಣೆ | 5 ಪಾಲಿಕೆಯಲ್ಲೂ ಬಿಜೆಪಿ ಗೆದ್ದೇ ಗೆಲ್ಲುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಬಿ.ವೈ ವಿಜಯೇಂದ್ರ


















