ಉಡುಪಿ: ಭಾರತ ಭಾರತವಾಗಿಯೇ ಉಳಿದರೆ ಮಾತ್ರ ನಮ್ಮ ಮುಂದಿನ ಪೀಳಿಗೆ ಸುಖ ಸಂತೋಷದಿಂದ ಇರಲಿದೆ ಎಂದು ಅಯೋಧ್ಯೆ ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ಖಜಾಂಚಿ ಶ್ರೀ ಸ್ವಾಮಿ ಗೋವಿಂದದೇವ್ ಗಿರಿ ಮಹಾರಾಜ್ ಅಭಿಪ್ರಾಯಪಟ್ಟಿದ್ದಾರೆ.
ಪರ್ಯಾಯ ಶ್ರೀ ಪುತ್ತಿಗೆಮಠ ಶ್ರೀ ಕೃಷ್ಣಮಠದಲ್ಲಿ ಚಾಂದ್ರ ಶ್ರೀ ಕೃಷ್ಣಾಷ್ಟಮಿಯಂದು ನೂತನವಾಗಿ ನಿರ್ಮಿಸಿದ ಸುವರ್ಣ ಪಥ ಉದ್ಘಾಟಿಸಿ, ರಾಜಾಂಗಣದಲ್ಲಿ ನಡೆದ ಧಾರ್ಮಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತೀಯರು ಭಾಷೆ, ದಕ್ಷಿಣೋತ್ತರ ಮತ್ತು ಸಂಪ್ರದಾಯ ಭೇದಭಾವ ಬಿಟ್ಟು ಸಾಮರಸ್ಯದಿಂದ ಸಾಂಸ್ಕೃತಿಕ ಭಾರತವನ್ನು ಒಪ್ಪಬೇಕು, ಪ್ರೀತಿಸಬೇಕು. ಭಾರತ ಮಾತೆಯನ್ನು ಅಂತಃಕರಣದಲ್ಲಿಟ್ಟು ಪೂಜಿಸಬೇಕು. ಭಾರತ ಉಳಿದರೆ ತೀರ್ಥಕ್ಷೇತ್ರ, ಪೂಜಾ ಪದ್ಧತಿ, ಗ್ರಂಥಗಳು-ಎಲ್ಲವೂ ಉಳಿಯುತ್ತವೆ ಎಂದು ಹೇಳಿದ್ದಾರೆ.
ಶ್ರೀ ಕೃಷ್ಣ ಮಾನವ ಜೀವನ ನಡೆಸಿಲ್ಲ. ದೈವಿಕ ಜೀವನ ನಡೆಸಿದ್ದಾನೆ. ದೇವರು ಐತಿಹಾಸಿಕ ವಿಷಯವಲ್ಲ. ಅವನು ಸನಾತನಿ ಮತ್ತು ಸರ್ವತ್ರ. ಭಗವದ್ಗೀತೆಯ ಅನುಷ್ಠಾನ ನಿತ್ಯ ಜೀವನದಲ್ಲಿ ಆಗಬೇಕೆಂದಿದ್ದಾರೆ.
ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಅನುಗ್ರಹ ನುಡಿಗಳನ್ನಾಡಿ, ಶ್ರೀ ಕೃಷ್ಣನು ಮನುಷ್ಯ ಎನ್ನುವವರು ಮೂರ್ಖರು. ಶ್ರೀ ಕೃಷ್ಣ ಮಹಾವಿಷ್ಣುವಿನ ಅವತಾರ ಎಂದು ಹೇಳಿದ್ದಾರೆ.
ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಅನುಗ್ರಹಿಸಿದರು. ಸ್ವಾಮಿ ಗೋವಿಂದದೇವ್ ಗಿರಿ ಮಹಾರಾಜ್ ಅವರಿಗೆ ಪರ್ಯಾಯ ಶ್ರೀ ಪುತ್ತಿಗೆ ಮಠದಿಂದ “ರಾಮಕೃಷ್ಣ ಮಂದಿರ ಧುರಂಧರ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ರಾಜಾಂಗಣದಿಂದ ಗೀತಾಮಂದಿರದ ಎದುರಿನಿಂದ ರಥಬೀದಿಗೆ ತೆರಳಲು ನಿರ್ಮಿಸಿದ ಸುವರ್ಣ ಪಥ ಉದ್ಘಾಟನೆ ಸಂದರ್ಭ ಉಭಯ ಶ್ರೀಪಾದರೊಂದಿಗೆ ಗುತ್ತಿಗೆದಾರ ಸಂತೋಷ್ ಶೆಟ್ಟಿ ತೆಂಕರಗುತ್ತು ಮೊದಲಾದವರು ಉಪಸ್ಥಿತರಿದ್ದರು.
ಪ್ರತಿಮಾ ಜಯಪ್ರಕಾಶ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ಮಠದ ವಿದ್ವಾಂಸ ಡಾ|ಬಿ.ಗೋಪಾಲ ಆಚಾರ್ಯ ನಿರೂಪಿಸಿದರು.



















