ಕುಂದಾಪುರ : ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಆದಾಯ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಹೋಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿಗೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ.ಬಾಬು ಶೆಟ್ಟಿ ಪತ್ರಿಕಾ ಹೇಳಿಕೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನವು ‘ಎ’ ವರ್ಗದ ದೇವಸ್ಥಾನವಾಗಿದ್ದು, 2023-24 ರಲ್ಲಿ ಆದಾಯ ₹68.23 ಕೋಟಿ, ವೆಚ್ಚ ₹41.63 ಕೋಟಿ ಹಾಗೂ ಉಳಿತಾಯ ₹26.59 ಕೋಟಿ ಆಗಿದೆ ಎಂದಿದ್ದಾರೆ.
2024-25 ಆದಾಯ ₹71.93 ಕೋಟಿ ವೆಚ್ಚ , ₹40.58 ಕೋಟಿ, ಉಳಿತಾಯ ₹31.35 ಕೋಟಿ ಇದೆ. ಕಳೆದ ಎರಡು ವರ್ಷಗಳಲ್ಲಿ ದೇವಳದ ಉಳಿತಾಯ ₹ 57.94 ಕೋಟಿ ಆಗಿದ್ದು, ಈ ಹಣವನ್ನು ದೇವಸ್ಥಾನದ ಹೆಸರಿನಲ್ಲಿ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ನಿರಖು ಠೇವಣಿಯಲ್ಲಿ ಇರಿಸಲಾಗಿದೆ. ಪ್ರಸ್ತುತ ದೇವಸ್ಥಾನದ ಹೆಸರಿನಲ್ಲಿ ನಿರಖು ಠೇವಣಿಯಲ್ಲಿ ತೊಡಗಿಸಿದ ಮೊತ್ತ ₹212 ಕೋಟಿ ಆಗಿದೆ ಎಂದು ಹೇಳಿದ್ದಾರೆ.
ದೇವಸ್ಥಾನದ ಆದಾಯದಿಂದ ದೇವಳದ ದೈನಂದಿನ ಖರ್ಚು, ವಾರ್ಷಿಕ ಜಾತ್ರೆ, ಅಭಿವೃದ್ಧಿ ಕೆಲಸ, ಸಿಬ್ಬಂದಿ ವೆಚ್ಚ, ಭಕ್ತಾದಿಗಳಿಗೆ ಉಚಿತ ಅನ್ನಸಂತರ್ಪಣೆ, ಭಕ್ತಾದಿಗಳ ಮೂಲ ಸೌಕರ್ಯ, ಗೋಶಾಲೆ ನಿರ್ವಹಣೆ, ದೇವಸ್ಥಾನಕ್ಕೆ ಸೇರಿದ 5 ಪ್ರೌಢಶಾಲೆ ಮತ್ತು 1 ಪದವಿಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಉಚಿತ ಬಿಸಿಯೂಟ, ಪಠ್ಯ ಪುಸ್ತಕ, ಸಮವಸ್ತ್ರ ಇತ್ಯಾದಿಗಳ ವೆಚ್ಚಗಳನ್ನು ಭರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.



















