ನವದೆಹಲಿ: ಇಸ್ರೇಲ್-ಇರಾನ್ ಸಂಘರ್ಷದ ನಡುವೆ ಭಾರತವು ಇರಾನ್ನಿಂದ ತನ್ನ ನಾಗರಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ಕಾರ್ಯ ಆರಂಭಿಸಿದೆ. ಸರ್ಕಾರಿ ಮೂಲಗಳ ಪ್ರಕಾರ, ಸುಮಾರು 100 ಭಾರತೀಯ ನಾಗರಿಕರ ಮೊದಲ ತಂಡವು ಸೋಮವಾರ ರಾತ್ರಿ ಇರಾನ್ನಿಂದ ಅರ್ಮೇನಿಯಾಕ್ಕೆ ಗಡಿ ದಾಟಲಿದೆ. ಇರಾನ್ನ ವಾಯುಪ್ರದೇಶವನ್ನು ಮುಚ್ಚಿದ ನಂತರ, ಭಾರತದ ಮನವಿಗೆ ಸ್ಪಂದಿಸಿರುವ ಇರಾನ್, ಭಾರತೀಯರಿಗೆ ಅಜರ್ಬೈಜಾನ್, ತುರ್ಕಮೆನಿಸ್ತಾನ್ ಮತ್ತು ಅಫ್ಘಾನಿಸ್ತಾನದಂತಹ ಗಡಿಗಳ ಮೂಲಕ ಭೂಮಾರ್ಗದಲ್ಲಿ ಸುರಕ್ಷಿತವಾಗಿ ತೆರಳಲು ಅನುಮತಿ ನೀಡಿದೆ.
ಇಸ್ರೇಲ್-ಇರಾನ್ ಯುದ್ಧ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಇರಾನ್ನ ಪ್ರಮುಖ ನಗರಗಳ ಮೇಲೆ ಇಸ್ರೇಲ್ನ ಬಾಂಬ್ ದಾಳಿ ಮುಂದುವರಿದಿದೆ. ಈ ಪರಿಸ್ಥಿತಿಯಲ್ಲಿ ಇರಾನ್ನಲ್ಲಿ ಸಿಲುಕಿರುವ ಸುಮಾರು 10,000 ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಅಥವಾ ಸ್ವದೇಶಕ್ಕೆ ಕರೆತರಲು ಭಾರತ ಸರ್ಕಾರ ಕ್ರಮ ಕೈಗೊಂಡಿದೆ.
ಟೆಹ್ರಾನ್ ವಿಶ್ವವಿದ್ಯಾಲಯದ ವೈದ್ಯಕೀಯ ವಿಜ್ಞಾನಗಳ ವಿದ್ಯಾರ್ಥಿಗಳ ಬಾಲಕರ ವಸತಿಗೃಹದ ಬಳಿ ದಾಳಿಯೊಂದು ನಡೆದಿದ್ದು, ಕಾಶ್ಮೀರದ ಇಬ್ಬರು ಭಾರತೀಯ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಆದರೆ, ಇಬ್ಬರ ಆರೋಗ್ಯವೂ ಈಗ ಸ್ಥಿರ ಸ್ಥಿತಿಯಲ್ಲಿದ್ದು, ವಿಶ್ವವಿದ್ಯಾಲಯದಿಂದ ರಾಮ್ಸರ್ಗೆ ಸ್ಥಳಾಂತರಗೊಂಡಿದ್ದಾರೆ ಎಂದು ವರದಿಯಾಗಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ಪ್ರಕಾರ, ಭಾರತೀಯ ನಾಗರಿಕರು, ವಿಶೇಷವಾಗಿ ವಿದ್ಯಾರ್ಥಿಗಳನ್ನು ಇರಾನ್ನ ಒಳಗೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಭಾರತೀಯ ರಾಯಭಾರ ಕಚೇರಿಯ ಮೇಲ್ವಿಚಾರಣೆಯಲ್ಲಿ ಈ ಕಾರ್ಯಾಚರಣೆ ನಡೆಯುತ್ತಿದ್ದು, ಅರ್ಮೇನಿಯಾದ ಮೂಲಕ ಕರೆತರುವ ಆಯ್ಕೆಯನ್ನು ಸಕ್ರಿಯವಾಗಿ ಪರಿಗಣಿಸಲಾಗುತ್ತಿದೆ. ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ಅರ್ಮೇನಿಯಾದ ಸಚಿವ ಅರಾರತ್ ಮಿರ್ಜೋಯಾನ್ ಅವರೊಂದಿಗೆ ಸರಕು ಸಾಗಣೆ ಮತ್ತು ರಾಜತಾಂತ್ರಿಕ ಸಮನ್ವಯದ ಬಗ್ಗೆ ಚರ್ಚಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2022ರ ಸರ್ಕಾರಿ ದತ್ತಾಂಶದ ಪ್ರಕಾರ, ಇರಾನ್ನಲ್ಲಿ ಸುಮಾರು 10,000 ಭಾರತೀಯ ನಾಗರಿಕರು ವಾಸಿಸುತ್ತಿದ್ದಾರೆ, ಅದರಲ್ಲಿ 2,000ಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳಾಗಿದ್ದಾರೆ. ಅಲ್ಲಿರುವ ಎಲ್ಲ ಭಾರತೀಯರೂ ಅನಗತ್ಯವಾಗಿ ಪ್ರಯಾಣಿಸದಂತೆ, ಸರ್ಕಾರದ ಎಲ್ಲ ಸೂಚನೆಗಳನ್ನೂ ಪಾಲಿಸುವಂತೆ, ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿರುವಂತೆ ಭಾರತೀಯ ರಾಯಭಾರ ಕಚೇರಿ ಸೂಚಿಸಿದೆ.