ಬೆಂಗಳೂರು: ಕೇಂದ್ರ ಸರ್ಕಾರಿ ನೌಕರರಿಗೆ ಪ್ರತಿ ವರ್ಷ ಸಂಬಳದ ಹೆಚ್ಚಳದ ಜತೆಗೆ ಎರಡು ಬಾರಿ ನೀಡುವ ತುಟ್ಟಿ ಭತ್ಯೆಯು ಪ್ರಮುಖವಾಗಿದೆ. ಇದರಿಂದ ನೌಕರರ ಸಂಬಳವು ಜಾಸ್ತಿಯಾಗಲಿದೆ. ಇದರ ಮಧ್ಯೆಯೇ, ನೂತನ ಹಣಕಾಸು ಕಾಯ್ದೆ-2025ರ ಪ್ರಕಾರ, ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ರದ್ದುಗೊಳಿಸಲಾಗುತ್ತದೆ ಎಂಬ ಮಾತುಗಳು ಕೇಳಿಬಂದಿವೆ. ಹಾಗಾಗಿ, ಇದರ ಬಗ್ಗೆ ಕೇಂದ್ರ ಸರ್ಕಾರವು ಮಹತ್ವದ ಸ್ಪಷ್ಟನೆ ನೀಡಿದೆ.
ಕೇಂದ್ರ ಸರ್ಕಾರವು ಹಣಕಾಸು ಆಯೋಗಗಳ ಶಿಫಾರಸುಗಳಂತೆ ಪ್ರತಿ ವರ್ಷ ನೀಡುವ ತುಟ್ಟಿ ಭತ್ಯೆಯನ್ನು ರದ್ದುಗೊಳಿಸಲಾಗುತ್ತದೆ ಎಂದು ವಾಟ್ಸ್ ಆ್ಯvಪ್ ಸೇರಿ ಹಲವು ಸೋಷಿಯಲ್ ಮೀಡಿಯಾಗಳಲ್ಲಿ ವದಂತಿ ಹರಡಿಸಲಾಗುತ್ತಿದೆ. ಇದು ಸುಳ್ಳು ಸುದ್ದಿಯಾಗಿದೆ. ನೂತನ ಹಣಕಾಸು ಕಾಯ್ದೆ ಅಡಿಯಲ್ಲಿ ತುಟ್ಟಿಭತ್ಯೆಗಳನ್ನು ರದ್ದುಗೊಳಿಸಲಾಗುವುದಿಲ್ಲ ಎಂದು ಮಹತ್ವದ ಸ್ಪಷ್ಟನೆ ನೀಡಿದೆ. ಇದರಿಂದ ಕೇಂದ್ರ ಸರ್ಕಾರಿ ನೌಕರರು ನಿಟ್ಟುಸಿರು ಬಿಡುವಂತಾಗಿದೆ.
ಕೇಂದ್ರ ಸರ್ಕಾರಿ ನೌಕರರು ಹಾಗೂ ನಿವೃತ್ತ ನೌಕರರಿಗೆ ನೀಡುವ ಯಾವುದೇ ತುಟ್ಟಿಭತ್ಯೆಯನ್ನು ನಿಲ್ಲಿಸುವ ಪ್ರಸ್ತಾಪವು ಕೇಂದ್ರ ಸರ್ಕಾರದ ಬಳಿ ಇಲ್ಲ. ನೂತನ ಹಣಕಾಸು ಕಾಯ್ದೆ ಅಡಿಯಲ್ಲೂ ತುಟ್ಟಿ ಭತ್ಯೆಯನ್ನು ನಿಲ್ಲಿಸುವುದಿಲ್ಲ. ನೌಕರನು ದುರ್ವರ್ತನೆ ತೋರಿ ಕೆಲಸದಿಂದ ವಜಾಗೊಂಡಿದ್ದರೆ ಮಾತ್ರ ಅವರಿಗೆ ತುಟ್ಟಿ ಭತ್ಯೆ ನೀಡಲಾಗುವುದಿಲ್ಲ ಅಷ್ಟೇ. ಉಳಿದವರಿಗೆ ತುಟ್ಟಿ ಭತ್ಯೆ ಮುಂದುವರಿಯಲಿದೆ ಎಂದು ಸರ್ಕಾರ ತಿಳಿಸಿದೆ.
ಕೇಂದ್ರ ಸರ್ಕಾರವು ಈಗಾಗಲೇ 8ನೇ ವೇತನ ಆಯೋಗವನ್ನು ರಚಿಸಿದೆ. ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಲು ಗಡುವನ್ನೂ ನೀಡಿದೆ. ವೇತನ ಆಯೊಗ ರಚನೆಯಾಗಿ, ಅದರ ಶಿಫಾರಸುಗಳು ಜಾರಿಗೆ ಬಂದರೆ ನೌಕರರ ಬೇಸಿಕ್ ಸಂಬಳ, ತುಟ್ಟಿಭತ್ಯೆ ಸೇರಿ ಹಲವು ಭತ್ಯೆಗಳು ಜಾಸ್ತಿಯಾಗಲಿವೆ. ಹಾಗಾಗಿ, ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರು ನೂತನ ಆಯೋಗದ ಜಾರಿಗೆ ಕುತೂಹಲದಿಂದ ಕಾಯುತ್ತಿದ್ದಾರೆ.
ಇದನ್ನೂ ಓದಿ: ನೀರಿನ ಬಿಲ್ ಬಾಕಿ ಉಳಿಸಿಕೊಂಡವರಿಗೆ ಬಂಪರ್ ; ಒನ್ ಟೈಮ್ ಸೆಟಲ್ ಮೆಂಟ್ ಗೆ ಚಾನ್ಸ್



















