ನವದೆಹಲಿ: ಇತ್ತೀಚೆಗೆ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ 4 ದಿನಗಳ ಸಂಘರ್ಷದ ವೇಳೆ ಭಾರತೀಯ ವಾಯುಪಡೆ (IAF) ನಡೆಸಿದ ‘ಆಪರೇಷನ್ ಸಿಂದೂರ’ ಕಾರ್ಯಾಚರಣೆಯು ಪಾಕಿಸ್ತಾನಕ್ಕೆ ನಾವು ಅಂದುಕೊಂಡದ್ದಕ್ಕಿಂತ ಹೆಚ್ಚಿನ ಹೊಡೆತವನ್ನು ನೀಡಿದೆ ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ. ಈ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ 6 ಯುದ್ಧವಿಮಾನಗಳು, 2 ಉನ್ನತ ಮೌಲ್ಯದ ವಿಮಾನಗಳು, 10ಕ್ಕೂ ಹೆಚ್ಚು ಯುಎವಿಗಳು(ಡ್ರೋನ್), ಒಂದು ಸಿ-130 ಸಾಗಣೆ ವಿಮಾನ ಮತ್ತು ಹಲವಾರು ಕ್ರೂಸ್ ಕ್ಷಿಪಣಿಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದು ಏಪ್ರಿಲ್ 22ರ ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಮೇ 6-7ರ ರಾತ್ರಿ ಭಾರತವು ಆರಂಭಿಸಿದ ಆಪರೇಷನ್ ಸಿಂದೂರದ ಭಾಗವಾಗಿತ್ತು. ಭಾರತೀಯ ವಾಯುಸೇನೆಯು ಪಾಕಿಸ್ತಾನದ ಭಯೋತ್ಪಾದಕ ತಾಣಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಿತ್ತು.
ರಫೇಲ್ ಮತ್ತು ಸುಖೋಯ್-30 ಯುದ್ಧವಿಮಾನಗಳ ಮೂಲಕ ನಡೆಸಿದ ಒಂದು ದಾಳಿಯಲ್ಲಿ, ಪಾಕಿಸ್ತಾನದ ವಾಯುಪಡೆಯ ಬಳಿಯಿದ್ದ ಚೀನಾದ ವಿಂಗ್ ಲೂಂಗ್ ಸರಣಿಯ ಮಧ್ಯಮ-ಎತ್ತರದ ದೀರ್ಘ ವ್ಯಾಪ್ತಿಯ ಡ್ರೋನ್ಗಳು ಕ್ಷಣಮಾತ್ರದಲ್ಲಿ ಧ್ವಂಸಗೊಂಡವು. ಇದರ ಜೊತೆಗೆ, 10ಕ್ಕೂ ಹೆಚ್ಚು ಯುಎವಿಗಳನ್ನು ಭಾರತೀಯ ವಾಯು ರಕ್ಷಣಾ ವ್ಯವಸ್ಥೆಗಳು ಪಾಕಿಸ್ತಾನದ ಗಗನಸೀಮೆಯಲ್ಲೇ ತಡೆದು ನಾಶಪಡಿಸಿದವು.
ಪಾಕಿಸ್ತಾನಕ್ಕಾದ ನಷ್ಟಗಳು
ಯುದ್ಧವಿಮಾನಗಳು: ಪಾಕಿಸ್ತಾನದ ಆರು ಯುದ್ಧವಿಮಾನಗಳು ಗಗನದಲ್ಲೇ ಧ್ವಂಸಗೊಂಡವು. ಇವುಗಳಲ್ಲಿ ಎಫ್-16, ಜೆಎಫ್-17 ಥಂಡರ್ ಮತ್ತು ಮಿರಾಜ್-5 ವಿಮಾನಗಳೂ ಸೇರಿವೆ ಎಂದು ಮೂಲಗಳು ತಿಳಿಸಿವೆ.
ಉನ್ನತ ಮೌಲ್ಯದ ವಿಮಾನಗಳು: ಒಂದು ಎಲೆಕ್ಟ್ರಾನಿಕ್ ಕೌಂಟರ್ಮೆಶರ್ಸ್ ವಿಮಾನ ಅಥವಾ ಏರ್ಬೋರ್ನ್ ಅರ್ಲಿ ವಾರ್ನಿಂಗ್ ಆಂಡ್ ಕಂಟ್ರೋಲ್ (AEW&C) ವಿಮಾನವನ್ನು ಸುದರ್ಶನ ಕ್ಷಿಪಣಿಯಿಂದ ಸುಮಾರು 300 ಕಿ.ಮೀ ದೂರದಿಂದ ಧ್ವಂಸಗೊಳಿಸಲಾಯಿತು. ಇದರ ಜೊತೆಗೆ, ಭೋಲಾರಿ ವಾಯುನೆಲೆಯಲ್ಲಿ ಸ್ವೀಡಿಷ್ ಮೂಲದ ಮತ್ತೊಂದು AEW&C ವಿಮಾನವನ್ನು ಗಗನದಿಂದ ಭೂಮಿಗೆ ಉಡಾಯಿಸಿದ ಕ್ರೂಸ್ ಕ್ಷಿಪಣಿಗಳ ಮೂಲಕ ಧ್ವಂಸಗೊಳಿಸಲಾಗಿತ್ತು.
ಸಿ-130 ಸಾಗಣೆ ವಿಮಾನ: ಪಾಕಿಸ್ತಾನದ ಪಂಜಾಬ್ನಲ್ಲಿ ಭಾರತೀಯ ಡ್ರೋನ್ ದಾಳಿಯೊಂದರಲ್ಲಿ ಸಿ-130 ಸಾಗಣೆ ವಿಮಾನವನ್ನು ನಾಶಪಡಿಸಲಾಗಿದೆ ಎಂದೂ ಹೇಳಲಾಗಿದೆ.
ಕ್ಷಿಪಣಿಗಳು ಮತ್ತು ಡ್ರೋನ್ಗಳು: ಪಾಕಿಸ್ತಾನದ ಗಗನದಿಂದ ಮತ್ತು ಭೂಮಿಯಿಂದ ಉಡಾಯಿಸಿದ ಕ್ರೂಸ್ ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಭಾರತೀಯ ವಾಯು ರಕ್ಷಣಾ ವ್ಯವಸ್ಥೆಗಳಾದ ಎಸ್-400, ಎಮ್ಆರ್ಎಸ್ಎಎಂ ಮತ್ತು ಆಕಾಶ್ನಿಂದ ತಡೆಯಲಾಗಿದೆ.
ಕಾರ್ಯಾಚರಣೆಯ ತಂತ್ರ
ಆಪರೇಷನ್ ಸಿಂದೂರದಲ್ಲಿ ಭಾರತವು ಚೀನಾದಿಂದ ಪೂರೈಕೆಯಾದ ಪಾಕಿಸ್ತಾನದ ಎಚ್ಕ್ಯೂ-9 ಕ್ಷಿಪಣಿ ವ್ಯವಸ್ಥೆಗಳನ್ನು ಗುರಿಯಾಗಿಸಲು ಡಮ್ಮಿ ವಿಮಾನಗಳನ್ನು ಬಳಸಿತ್ತು. ಈ ಡಮ್ಮಿ ವಿಮಾನಗಳನ್ನು ಯುದ್ಧವಿಮಾನಗಳಂತೆ ರೂಪಿಸಿ, ಪಾಕಿಸ್ತಾನದ ರಾಡಾರ್ಗಳನ್ನು ಸಕ್ರಿಯಗೊಳಿಸುವಂತೆ ಮಾಡಲಾಯಿತು. ಈ ಮೂಲಕ ಅವುಗಳಿರುವ ಸ್ಥಳವನ್ನು ಗುರುತಿಸಿ ಧ್ವಂಸಗೊಳಿಸಲಾಯಿತು.
ಮೇ 9-10ರ ರಾತ್ರಿಯಂದು, ಭಾರತವು ಪಾಕಿಸ್ತಾನದ 11 ವಾಯುನೆಲೆಗಳನ್ನು ಗುರಿಯಾಗಿಸಿತು, ಇದರಲ್ಲಿ ಚಕ್ಲಾಲ, ಮುರಿದ್, ಸರ್ಗೋಧಾ, ರಹೀಮ್ಯಾರ್ ಖಾನ್, ಸುಕ್ಕೂರ್ ಮತ್ತು ಜಾಕೋಬಾಬಾದ್ ಸೇರಿವೆ. ಈ ದಾಳಿಗಳು ಪಾಕಿಸ್ತಾನದ ರಾಡಾರ್ ವ್ಯವಸ್ಥೆಗಳು, ಕಮಾಂಡ್ ಸೆಂಟರ್ಗಳು ಮತ್ತು ವಿಮಾನ ಶೆಲ್ಟರ್ಗಳಿಗೆ ಭಾರೀ ಹಾನಿಯುಂಟುಮಾಡಿತು.
ಪಾಕಿಸ್ತಾನವು ಆರಂಭದಲ್ಲಿ ತನ್ನ ಒಂದು ವಿಮಾನಕ್ಕೆ “ಸಣ್ಣ ಹಾನಿ” ಆಗಿದೆ ಎಂದಷ್ಟೇ ಹೇಳಿಕೊಂಡಿತ್ತು. ಆದರೆ ನಂತರದಲ್ಲಿ ಒಂದು AWACS ವಿಮಾನ ಮತ್ತು 11 ಸೈನಿಕರ ಸಾವನ್ನು ಪಾಕ್ ಒಪ್ಪಿಕೊಂಡಿತು. ಮೇ 10ರ ಮಧ್ಯಾಹ್ನದ ವೇಳೆಗೆ, ಭಾರೀ ನಷ್ಟದಿಂದಾಗಿ ಬೆದರಿದ ಪಾಕಿಸ್ತಾನವು ಭಾರತದ ಮುಂಗೆ ಅಂಗಲಾಚಿ ಕದನ ವಿರಾಮ ಒಪ್ಪಂದ ಮಾಡಿಕೊಂಡಿತು.