ಹಾಸನ: ನಿಲ್ಲಿಸಿದ್ದ ಕಾರಿನ ಡೋರ್ ತೆಗೆದು ಖದೀಮರು 6.30 ಲಕ್ಷ ರೂ. ಹಣ ಎಗರಿಸಿ ಪರಾರಿಯಾಗಿರುವ ಘಟನೆ ಜಿಲ್ಲೆಯ ಅರಸೀಕೆರೆ ಪಟ್ಟಣದ ಸುಭಾಷ್ ನಗರದಲ್ಲಿ ನಡೆದಿದೆ
ಸುಭಾಷ್ ನಗರದ ನಿವಾಸಿ ತಮಿಳುನಾಡಿನ ಸುರೇಶ್ ಹಣ ಕಳೆದುಕೊಂಡ ವ್ಯಕ್ತಿ. ಸುರೇಶ್ ಕಳೆದ 9 ವರ್ಷಗಳಿಂದಲೂ ಅರಸೀಕೆರೆ ಪಟ್ಟಣದ ಎಪಿಎಂಸಿಯಲ್ಲಿ ಕೊಬ್ಬರಿ ವ್ಯಾಪಾರ ಮಾಡುತ್ತಿದ್ದರು.
ನಿನ್ನೆ ಬ್ಯಾಂಕ್ ನಿಂದ ಹಣ ಡ್ರಾ ಮಾಡಿಕೊಂಡು ಕಾರಿನಲ್ಲಿ ಇಟ್ಟಿದ್ದರು. ಆದರೆ, ಕಾರು ಲಾಕ್ ಮಾಡುವುದನ್ನು ಮರೆತಿದ್ದರು. ಇದನ್ನು ಗಮನಿಸಿದ ಖದೀಮರು ಡೋರ್ ತೆಗೆದು ಹಣ ಎಗರಿಸಿ ಪರಾರಿಯಾಗಿದ್ದಾರೆ. ಸಿಸಿಟಿವಿ ಪರಿಶೀಲಿಸಿದಾಗ ಹಣ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಅರಸೀಕೆರೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.