ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆದಿರುವ ಸಂಬಂಧ ಆಗಸ್ಟ್ 5ರಂದು ಕಾಂಗ್ರೆಸ್ ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ರಾಷ್ಟ್ರಮಟ್ಟದ ಬೃಹತ್ ಪ್ರತಿಭಟನಾ ಸಮಾವೇಶವನ್ನು ಹಮ್ಮಿಕೊಳಲಾಗಿದೆ. ಈ ಪ್ರತಿಭಟನೆಗೆ ಮಂಡ್ಯ ಜಿಲ್ಲೆಯಿಂದ 5 ಸಾವಿರ ಜನರು ಬರಬೇಕು ಎಂದು ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರು ಮತಗಳ್ಳತನವಾಗಿರುವ ಸಂಬಂಧ ಈಗಾಗಲೇ ಅಭಿಪ್ರಾಯ ವ್ಯಕ್ತಪಡಿಸಿ, ಉದಯಪುರ ಲೋಕಸಭಾ ಕ್ಷೇತ್ರದಲ್ಲಿ ಮತದಾನದ ಸಂಶೋಧನೆ ನಡೆಸಲಾಗಿ ಸಾಬೀತಾದ ಕಾರಣದಿಂದ ಪ್ರತಿಭಟನೆಯ ಮೂಲಕ ರಾಷ್ಟ್ರವ್ಯಾಪಿ ಜಾಗೃತಿ ಮೂಡಿಸಲಾಗುವುದು ಎಂದರು.
ಉದಯಪುರ ಲೋಕಸಭಾ ಕ್ಷೇತ್ರದಲ್ಲಿ ಮತದಾನದ ಸಂಶೋಧನೆ ಆಧಾರದ ಮೇಲೆ ಚುನಾವಣಾ ಆಯೋಗಕ್ಕೆ ದೂರು ನೀಡಿದರೂ ದೂರು ಸ್ವೀಕರಿಸದ ಕಾರಣ ಪ್ರತಿಭಟನೆಯ ಮೂಲಕ ಚುನಾವಣಾ ಆಯೋಗದ ವೈಫಲ್ಯ ಹಾಗೂ ಕೇಂದ್ರಾಡಳಿತದ ಬಿಜೆಪಿ ಚುನಾವಣಾ ಆಯೋಗದ ದುರುಪಯೋಗವನ್ನು ಖಂಡಿಸಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಆರ್ಸಿಬಿ ಕಾಲ್ತುಳಿತದ ಪ್ರಕರಣದ ಹಿನ್ನೆಲೆ ರ್ಯಾಲಿ ನಡೆಸಲು ಹೈಕೋರ್ಟ್ ನಿರ್ಬಂಧ ಹೇರಿದ್ದು, ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನಾ ಸಮಾವೇಶ ನಡೆಸಲಾಗುತ್ತಿದೆ. ಬೆಂಗಳೂರಿನ ಅನಂತ್ರಾವ್ ವೃತ್ತದಿಂದ ಫ್ರೀಡಂ ಪಾರ್ಕ್ವರೆಗೂ ಸಂಚಾರದ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ ಎಂದು ತಿಳಿಸಿದರು.
ಮಂಡ್ಯ ಜಿಲ್ಲೆಯಿಂದ ಕಾಂಗ್ರೆಸ್ ಕಾರ್ಯಕರ್ತರು ಸೇರಿ 5 ಸಾವಿರ ಮಂದಿ ಪಾಲ್ಗೊಳ್ಳಬೇಕಾಗಿದೆ. ಅಂದು ಬೆಳಿಗ್ಗೆ 10 ಗಂಟೆಯೊಳಗೆ ಎಲ್ಲರೂ ಫ್ರೀಡಂ ಪಾರ್ಕ್ ಸೇರುವಂತೆ ಮನವಿ ಮಾಡಿದ ಅವರು, ರಾಷ್ಟ್ರೀಯ ನಾಯಕ ರಾಹುಲ್ಗಾಂಧಿ ಅವರು ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಕೈಚಳಕದ ಬಗ್ಗೆ, ಮಹಾರಾಷ್ಟ್ರದಲ್ಲಿಯೂ ಇದೇ ರೀತಿ ಬಿಜೆಪಿ ಕೈಚಳಕ ತೋರಿರುವ ಅನುಮಾನವಿದ್ದು, ಎಲ್ಲದರ ಮಾಹಿತಿ ಹಂಚಿಕೊಳ್ಳಲಿದ್ದಾರೆ. 50ರಿಂದ 70 ಸಾವಿರ ಮಂದಿ ಭಾಗವಹಿಸುಲಿದ್ದಾರೆಂದು ಅಂದಾಜಿಸಲಾಗಿದ್ದು, 1 ಲಕ್ಷ ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ ಎಂದು ಹೇಳಿದರು.
ಮತಗಳ್ಳತನವೆಂದರೆ ಮತ ಪೆಟ್ಟಿಗೆಯಿಂದ ಮತಗಳ ಸೇರ್ಪಡೆ, ಮತ ತೆಗೆಯುವ ಕ್ರಿಯೆಯಾಗಿದೆ. ಬೆಂಗಳೂರಿನ ಮಹದೇವಪುರದಲ್ಲಿ 52 ಸಾವಿರ ಮತಗಳ ಅದಲಿ ಬದಲಿಯಾಗಿರುವ ಸಂಶಯವನ್ನು ರಾಹುಲ್ಗಾಂಧಿ ಪ್ರಾರಂಭದಲ್ಲಿಯೇ ವ್ಯಕ್ತಪಡಿಸಿದ್ದರು. ರಾಜ್ಯದಲ್ಲಿ ನಮ್ಮ ಸರ್ಕಾರವಿದ್ದರೂ ಈ ರೀತಿಯಾಗಲಿಕ್ಕೆ ಚುನಾವಣೆಯಲ್ಲಿ ಮೋಸ ಮಾಡಲಾಗದೆಂಬ ಉದಾಸೀನತೆಯೇ ಕಾರಣವಾಗಿದೆ. ಕೇಂದ್ರ ಸರ್ಕಾರ ಇಡಿ, ಐಟಿ ದುರುಪಯೋಗ ಮಾಡಿಕೊಂಡಂತೆ ಚುನಾವಣಾ ಆಯೋಗವನ್ನು ದುರುಪಯೋಗ ಮಾಡಿಕೊಂಡಿದೆ ಎಂದು ಗಂಭೀರ ಆರೋಪ ಮಾಡಿದರು.



















