ಲಕ್ನೋ: ಎಲ್ಲರನ್ನೂ ಬೆರಗುಗೊಳಿಸುವಂಥ ಘಟನೆಯೊಂದು ಉತ್ತರಪ್ರದೇಶದಲ್ಲಿ ನಡೆದಿದ್ದು, 50 ವರ್ಷದ ಮಹಿಳೆಯೊಬ್ಬಳು ತನ್ನ 30 ವರ್ಷದ ಮೊಮ್ಮಗನೊಂದಿಗೆ ಓಡಿಹೋಗಿ ದೇವಾಲಯದಲ್ಲಿ ಆತನೊಂದಿಗೆ ಮದುವೆಯಾಗಿದ್ದಾಳೆ. ಈ ಸುದ್ದಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್(Viral News) ಆಗಿದೆ. ಇಬ್ಬರು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣುಮಕ್ಕಳು ಸೇರಿದಂತೆ ನಾಲ್ಕು ಮಕ್ಕಳನ್ನು ಹೊಂದಿರುವ ಇಂದ್ರಾವತಿ ಎಂಬ ಮಹಿಳೆ, ತನ್ನ ಮೊಮ್ಮಗ ಆಜಾದ್ನನ್ನು ಮದುವೆಯಾಗಬೇಕೆಂಬ ಮಹದಾಸೆಯಿಂದ ತನ್ನ ಇಡೀ ಕುಟುಂಬವನ್ನೇ ತೊರೆದಿದ್ದಾಳೆ.
ಇವರಿಬ್ಬರೂ ಗೋವಿಂದ್ ಸಾಹಿಬ್ ದೇವಸ್ಥಾನಕ್ಕೆ ಹೋಗಿ ಅಧಿಕೃತವಾಗಿ ವಿವಾಹವಾಗಿದ್ದಾರೆ. ಆಜಾದ್ ತನ್ನ ಅಜ್ಜಿ ಇಂದ್ರಾವತಿಯ ಹಣೆಗೆ ಸಿಂಧೂರವನ್ನು ಹಚ್ಚಿದ್ದು, ಇಬ್ಬರೂ ಪ್ರತಿಜ್ಞೆಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ. ಬಳಿಕ, ಪವಿತ್ರ ಬೆಂಕಿಯ ಸುತ್ತಲೂ ಏಳು ಸುತ್ತುಗಳನ್ನು ಸುತ್ತಿದ್ದಾರೆ.
ಇಂದ್ರಾವತಿ ಮತ್ತು ಆಜಾದ್ ಅಂಬೇಡ್ಕರ್ ನಗರದಲ್ಲೇ ವಾಸಿಸುತ್ತಿದ್ದರು. ಅವರ ಮನೆಗಳು ಸಮೀಪದಲ್ಲೇ ಇದ್ದವು. ಇಂದ್ರಾವತಿ ಮತ್ತು ಸಂಬಂಧದಿಂದ ಅವರ ಮೊಮ್ಮಗನಾಗಿದ್ದ ಆಜಾದ್ ಕಳೆದ ಕೆಲವು ತಿಂಗಳಿಂದ ಪರಸ್ಪರ ಪ್ರೀತಿಸಲು ಆರಂಭಿಸಿದ್ದರು. ಆಜಾದ್ ಆಗಾಗ ಇಂದ್ರಾವತಿಯ ಮನೆಗೂ ಬರುತ್ತಿದ್ದ. ಆದರೆ ಅವರದ್ದು ಅಜ್ಜಿ-ಮೊಮ್ಮಗನ ಸಂಬಂಧವಾದ ಕಾರಣ ಯಾರಿಗೂ ಅನುಮಾನ ಬಂದಿರಲಿಲ್ಲ.
ಆದರೆ, ಅವರು ಪರಾರಿಯಾಗುವ ನಾಲ್ಕು ದಿನಗಳ ಮೊದಲು, ಅವರಿಬ್ಬರೂ ಒಂದು ಕಡೆ ನಿಂತು ರಹಸ್ಯವಾಗಿ ಮಾತನಾಡುತ್ತಿರುವುದು ಇಂದ್ರಾವತಿಯ ಪತಿ ಚಂದ್ರಶೇಖರ್ ಅವರ ಗಮನಕ್ಕೆ ಬಂದಿತ್ತು. ಇದು ಅವರಿಗೆ ಸಣ್ಣಮಟ್ಟಿಗೆ ಅನುಮಾನಕ್ಕೆ ಕಾರಣವಾಗಿತ್ತು. ಕೂಡಲೇ ಅವರು ಇಂದ್ರಾವತಿ ಮತ್ತು ಆಜಾದ್ರನ್ನು ತರಾಟೆಗೆ ತೆಗೆದುಕೊಂಡಾಗ ಅವರಿಬ್ಬರೂ ಸಂಬಂಧದಲ್ಲಿರುವುದು ಗೊತ್ತಾಯಿತು. ಈ ಕೂಡಲೇ ಬೇರ್ಪಡುವಂತೆ ಮನವೊಲಿಸಲು ಅವರು ಪ್ರಯತ್ನಿಸಿದರು. ಆದರೆ ಚಂದ್ರಶೇಖರ ಅವರ ಮಾತುಗಳನ್ನು ಕೇಳಲು ಮಹಿಳೆಯಾಗಲೀ, ಆಕೆಯ ಪ್ರಿಯಕರನಾಗಲೀ ಸಿದ್ಧರಾಗಿರಲಿಲ್ಲ.
ಕೊನೆಗೆ ಈ ವಿಷಯವನ್ನು ಪರಿಹರಿಸಲು ಚಂದ್ರಶೇಖರ್ ಪೊಲೀಸರನ್ನು ಸಹ ಸಂಪರ್ಕಿಸಿದರು. ಆದಾಗ್ಯೂ, ಇಂದ್ರಾವತಿ ಮತ್ತು ಆಜಾದ್ ಇಬ್ಬರೂ ವಯಸ್ಕರಾಗಿದ್ದರಿಂದ ಮತ್ತು ಅವರ ಸಂಗಾತಿಯನ್ನು ಆಯ್ಕೆ ಮಾಡುವ ಹಕ್ಕನ್ನು ಹೊಂದಿದ್ದರಿಂದ ಪೊಲೀಸರು ದೂರು ದಾಖಲಿಸಿಕೊಳ್ಳಲು ನಿರಾಕರಿಸಿದರು.
ಇದರಿಂದ ಆಕ್ರೋಶಗೊಂಡ ಇಂದ್ರಾವತಿ ತನ್ನ ಪತಿ ಮತ್ತು ಮಕ್ಕಳಿಗೆ ಆಜಾದ್ ಜೊತೆ ಸೇರಿ ವಿಷ ಹಾಕಲೂ ಸಂಚು ರೂಪಿಸಿದ್ದಳು. ಆದರೆ ಆಕೆಯ ಯೋಜನೆ ವಿಫಲವಾಯಿತು.
ಈ ಕುರಿತು ಮಾತನಾಡಿರುವ ಚಂದ್ರಶೇಖರ್, “ಇಂದ್ರಾವತಿ ನನ್ನ ಎರಡನೇ ಪತ್ನಿ. ನಾನು ಕೆಲಸಕ್ಕೆ ಹೋಗುವ ಕಾರಣ ಹೆಚ್ಚಾಗಿ ಮನೆಯ ಹೊರಗೇ ಇರುತ್ತಿದ್ದೆ. ಆ ಸಂದರ್ಭದಲ್ಲೇ ನನ್ನ ಹೆಂಡತಿ ಮತ್ತು ಆಜಾದ್ ನಡುವೆ ಸಂಬಂಧ ಬೆಳೆಯಿತು” ಎಂದಿದ್ದಾರೆ.
ಈಗ ಇಂದ್ರಾವತಿಯು ತನಗೆ ಬಗೆದಿರುವ ದ್ರೋಹದಿಂದ ಸಿಟ್ಟಾಗಿರುವ ಚಂದ್ರಶೇಖರ್, “ಅವಳು ಇನ್ನು ನಮ್ಮ ಪಾಲಿಗೆ ಸತ್ತಂತೆಯೇ ಸರಿ. ಅದಕ್ಕೆ ಅವಳ ತಿಥಿ (ತೇರಾಹ್ವಿ- ಸತ್ತ 13 ನೇ ದಿನದಂದು ನಡೆಸಲಾಗುವ ಆಚರಣೆ) ಮಾಡಲು ನಿರ್ಧರಿಸಿದ್ದೇನೆ” ಎಂದು ಹೇಳಿದ್ದಾರೆ.