ದಾವಣಗೆರೆ: ಕಡಿಮೆ ಬೆಲೆಗೆ 250 ಗ್ರಾಂ ಚಿನ್ನದ ನಾಣ್ಯಗಳನ್ನು ನೀಡುವುದಾಗಿ ತಿಳಿಸಿ ವ್ಯಕ್ತಿಯೊರ್ವ 5 ಲಕ್ಷ ರೂ. ವಂಚನೆ ಮಾಡಿ ಪರಾರಿಯಾಗಿರುವ ಘಟನೆ ದಾವಣಗೆರೆಯ ಕುರ್ಕಿ ಗ್ರಾಮದಲ್ಲಿ ನಡೆದಿದೆ.
ಹುಬ್ಬಳ್ಳಿ ಮೂಲದ ಸುರೇಶ್ ಎಂಬಾತ ಚಿನ್ನದ ನಾಣ್ಯ ನೀಡಿವುದಾಗಿ ಹೇಳಿ ವಂಚಿಸಿದ ವ್ಯಕ್ತಿ. ತುಮಕೂರು ಜಿಲ್ಲೆಯ ಕೊರಟಿಗೆರೆ ತಾಲೂಕಿನ ಚಿಂಪುಗಾನಹಳ್ಳಿಯ ನಿವಾಸಿ ರಂಗನಾಥ್ 5 ಲಕ್ಷ ರೂ. ಕಳೆದುಕೊಂಡಿರುವ ವ್ಯಕ್ತಿ.
ಒಂದು ವರ್ಷದ ಹಿಂದೆ ಕೊರಟಗೆರೆ ತಾಲೂಕಿನ ಗೊರವನಹಳ್ಳಿಯ ಮಹಾಲಕ್ಷ್ಮಿ ದೇಗುಲದಲ್ಲಿ ರಂಗನಾಥ್ ಅವರಿಗೆ ಸುರೇಶ್ ಪರಿಚಯವಾಗಿತ್ತು. ಆಗ ತಮ್ಮ ದೂರವಾಣಿ ಸಂಖ್ಯೆಯನ್ನು ಪರಸ್ಪರ ವಿನಿಮಯ ಮಾಡಿಕೊಂಡಿದ್ದರು. ಅದಾದ ಕೆಲವು ದಿನಗಳ ಬಳಿಕ ರಂಗನಾಥ್ ಅವರಿಗೆ ಸುರೇಶ್ ಕರೆ ಮಾಡಿ, ನಮ್ಮ ಹಳೆ ಮನೆಯನ್ನು ತೆರವು ಗೊಳಿಸಿದಾಗ ಚಿನ್ನದ ನಾಣ್ಯಗಳು ಪತ್ತೆಯಾಗಿವೆ. ಅದನ್ನು ಕಡಿಮೆ ಬೆಲೆಗೆ ಕೊಡುವೆ, ನಿಮಗೆ ಬೇಕಿದ್ದರೆ ಸಂಪರ್ಕಿಸಿ ಎಂದು ಸುಳ್ಳು ಮಾಹಿತಿ ನೀಡಿದ್ದ.
ಸುರೇಶ್ ಆರಂಭದಲ್ಲಿ ರಂಗನಾಥ್ ಅವರಿಗೆ ಒಂದು ಅಸಲಿ ಚಿನ್ನದ ನಾಣ್ಯ ನೀಡಿ ನಂಬಿಕೆ ಗಳಿಸಿಕೊಂಡಿದ್ದ. ನಂತರದಲ್ಲಿ ರಂಗನಾಥ್ ಅವರನ್ನು ದಾವಣಗೆರೆ ತಾಲೂಕಿನ ಕುರ್ಕಿ ಗ್ರಾಮಕ್ಕೆ ಬರುವಂತೆ ತಿಳಿಸಿ, 5 ಲಕ್ಷ ರೂ. ಪಡೆದು ಕಾಲು ಕೆ.ಜಿ ನಕಲಿ ಚಿನ್ನದ ನಾಣ್ಯಗಳನ್ನು ನೀಡಿ ಪರಾರಿಯಾಗಿದ್ದ. ಬಳಿಕ ರಂಗನಾಥ್ ಅವರು ಅದನ್ನು ಪರೀಕ್ಷಿಸಿದಾಗ ಅದು ನಕಲಿ ಚಿನ್ನ ಎಂದು ತಿಳಿದು ಬಂದಿದೆ.
ನಂತರ ಮೋಸ ಹೋದ ರಂಗನಾಥ್ ತಕ್ಷಣವೇ ಹತ್ತಿರದ ಹದಡಿ ಠಾಣೆಗೆ ಭೇಟಿ ನೀಡಿ, ದೂರು ನೀಡಿದ್ದಾರೆ. ಸದ್ಯ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.