ಚಿಕ್ಕಬಳ್ಳಾಪುರ: ಬರೋಬ್ಬರಿ 5 ಕೋಟಿ ರೂ. ಮೌಲ್ಯದ ಮೊಬೈಲ್ (Mobile) ಕದ್ದಿದ್ದ ಖದೀಮರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಉತ್ತರ ಪ್ರದೇಶದಿಂದ ಬೆಂಗಳೂರಿಗೆ (Bengaluru) ಟ್ರಕ್ ನಲ್ಲಿ ಮೊಬೈಲ್ ಗಳನ್ನು ಸಾಗಿಸುತ್ತಿದ್ದ ವೇಳೆ ಸಿನಿಮೀಯ ರೀತಿಯಲ್ಲಿ ಖದೀಮರು ಕಳ್ಳತನ ಮಾಡಿದ್ದರು ಎನ್ನಲಾಗಿದೆ.
2024ರ ನವೆಂಬರ್ 23ರಂದು ಟ್ರಕ್ವೊಂದು ರಾಷ್ಟ್ರೀಯ ಹೆದ್ದಾರಿ-44ರ (National Highway – 4) ಮೂಲಕ ಉತ್ತರಪ್ರದೇಶದ ನೋಯ್ಡಾದಿಂದ ಬೆಂಗಳೂರಿಗೆ ಬರೋಬ್ಬರಿ 6,640 ಮೊಬೈಲ್ ಗಳನ್ನು ಹೊತ್ತು ಬರುತ್ತಿತ್ತು. ಆದರೆ, ಅದು ಬೆಂಗಳೂರು ತಲುಪಿರಲಿಲ್ಲ. ಚಿಕ್ಕಬಳ್ಳಾಪುರ ತಾಲೂಕಿನ ಪೇರೇಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯ ರೆಡ್ಡಿಗೊಲ್ಲವಾರಹಳ್ಳಿ ಬಳಿ ಡಾಬಾ ವೊಂದರ ಬಳಿ ಟ್ರಕ್ ನಿಲ್ಲಿಸಲಾಗಿತ್ತು. ಚಾಲಕ ಮಾತ್ರ ಅದರಲ್ಲಿ ಇರಲಿಲ್ಲ.
ಆನಂತರ ಪೊಲೀಸರು ತನಿಖೆ ಕೈಗೊಂಡಾಗ ಚಾಲಕನ ಕ್ಯಾಬಿನ್ನಿಂದಲೇ ರಂದ್ರ ಕೊರೆದು ಮೊಬೈಲ್ ಗಳನ್ನು ದೋಚಿ ಮತ್ತೊಂದು ಟ್ರಕ್ ಗೆ ತುಂಬಿಸಿರುವುದು ಗೊತ್ತಾಗಿತ್ತು. ಇನ್ನುಳಿದ ಮೊಬೈಲ್ ಗಳು ಟ್ರಕ್ ನಲ್ಲೇ ಇದ್ದವು. ಸದ್ಯ ಪ್ರಕರದ ತನಿಖೆ ಕೈಗೊಂಡಿರುವ ಪೊಲೀಸರು 7 ಜನ ಆರೋಪಿಗಳನ್ನು ಬಂಧಿಸಿದ್ದಾರೆ.
ಚಾಲಕ ರಾಹುಲ್, ಇಮ್ರಾನ್, ಮೊಹಮ್ಮದ್ ಮುಸ್ತಫಾ, ಅನೂಪ್ ರಾಯ್, ಅಭಿಜಿತ್ ಪೌಲ್, ಸಕೃಲ್ಲಾ ಹಾಗೂ ಯೂಸುಫ್ ಖಾನ್ ಬಂಧಿತ ಆರೋಪಿಗಳು. ಬಂಧಿತರಿಂದ ಮೊಬೈಲ್ ಸಾಗಾಟ ಮಾಡಲು ಬಳಸಿದ್ದ ಟ್ರಕ್ ಸೇರಿ ಕಳವು ಮಾಡಿದ್ದ 5,140 ಮೊಬೈಲ್ಗಳ ಪೈಕಿ 56 ಮೊಬೈಲ್ ಗಳನ್ನು ಜಪ್ತಿ ಮಾಡಲಾಗಿದೆ. ನಾಲ್ಕೂವರೆ ಕೋಟಿ ಮೌಲ್ಯದ ಮೊಬೈಲ್ಗಳನ್ನ ಕಳ್ಳರು ಕೇವಲ 90 ಲಕ್ಷ ರೂ. ಗೆ ಕಾಳಸಂತೆಯಲ್ಲಿ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ. ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.