ಬೆಂಗಳೂರು: ತಾಯಿಯೊಂದಿಗೆ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಲಾರಿ ಹರಿದು 4 ವರ್ಷದ ಬಾಲಕಿ ಸಾವನ್ನಪ್ಪಿದ ಘಟನೆ ಬೆಂಗಳೂರಿನ ಉತ್ತರ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹನುಮಂತೇಗೌಡನ ಪಾಳ್ಯದಲ್ಲಿ ನಡೆದಿದೆ.
ನಿಶಿಕಾ (4) ಮೃತ ಬಾಲಕಿ. ಯುಗಾದಿ ಹಬ್ಬ ಮುಗಿಸಿ ತಾಯಿ-ಮಗಳು ದೇವರ ದರ್ಶನಕ್ಕೆಂದು ದೇವಸ್ಥಾನಕ್ಕೆ ತೆರಳುತ್ತಿದ್ದರು. ಎರಡನೇ ಮಗು ಕಂಕುಳಲ್ಲಿ ಹಾಗೂ ಮೊದಲ ಮಗುವಿನ ಕೈ ಹಿಡಿದು ತೆರಳುತ್ತಿದ್ದ ವೇಳೆ ಎದುರಿಗೆ ಬರುತ್ತಿದ್ದ ಲಾರಿ ಏಕಾಏಕಿ ಮಗುವಿನ ಮೇಲೆ ಹರಿದಿದೆ.
ಅಪಘಾತದ ಪರಿಣಾಮ ಹೆತ್ತ ತಾಯಿಯ ಎದುರೇ ಬಾಲಕಿ ಉಸಿರು ಚೆಲ್ಲಿದ್ದಾಳೆ. ಘಟನಾ ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ನೆಲಮಂಗಲ ಸರ್ಕಾರಿ ಶವಗಾರಕ್ಕೆ ರವಾನಿಸಲಾಗಿದೆ.
ಇದನ್ನೂ ಓದಿ : ವ್ಯಕ್ತಿಯ ಕತ್ತು ಸೀಳಿ ಆರೋಪಿ ಎಸ್ಕೇಪ್.. ರಕ್ತದ ಮಡುವಲ್ಲಿ ಒದ್ದಾಡ್ತಿದ್ದವನ ಪ್ರಾಣ ಉಳಿಸಿದ ಪೊಲೀಸರು!



















