ಬೆಂಗಳೂರು : ಹಲವು ಜಾತಿಗಳ ಮುಂದೆ ಕ್ರಿಶ್ಚಿಯನ್ ಎನ್ನುವ ಪದ ಸೇರಿಸಿದ್ದ ವಿಚಾರದ ತೀವ್ರ ಸ್ವರೂಪದ ವಿವಾದ ಹುಟ್ಟುಹಾಕಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆ ವೇಳೆ ಲಿಂಗಾಯತ ಕ್ರಿಶ್ಚಿಯನ್, ಒಕ್ಕಲಿಗ ಕ್ರಿಶ್ಚಿಯನ್ ಹೀಗೆ 33 ಜಾತಿಗಳನ್ನು ಅಧಿಕೃತವಾಗಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಕೈಬಿಟ್ಟಿದೆ.
ಇಂದು(ರವಿವಾರ) ಈ ಸಂಬಂಧಿಸಿದಂತೆ ದೇವರಾಜು ಅರಸು ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ನಾಯಕ್, ಸೆ.22ರಿಂದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ರಾಜ್ಯಾದ್ಯಂತ ನಡೆಯಲಿದ್ದು, ಇದರಲ್ಲಿ ಪಟ್ಟಿ ಮಾಡಿರುವ 1,561 ಜಾತಿಗಳ ಪೈಕಿ 33 ಜಾತಿಗಳನ್ನು ಕೈಬಿಡಲಾಗಿದೆ ಎಂದು ಪ್ರಕಟಿಸಿದ್ದಾರೆ.
ಈ ಹಿಂದಿನ ಕಾಂತರಾಜು ಆಯೋಗದ ಸಮೀಕ್ಷೆಯಲ್ಲಿದ್ದ ಮಾಹಿತಿ, ಕಲಂಗಳನ್ನೇ ಉಪಯೋಗಿಸಿಕೊಂಡು ಸರ್ವೇ ಮಾಡಲಾಗುತ್ತಿದೆ. ಇದರಿಂದ ಕಾನೂನು ಉಲ್ಲಂಘನೆ ಆಗಿಲ್ಲ. ಈ ಮಾಹಿತಿಯನ್ನು ಸಮುದಾಯಗಳ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಪರಿಸ್ಥಿತಿಗಳನ್ನು ಪಟ್ಟಿ ಮಾಡುತ್ತೇವೆ ಹೊರತು ಬೇರೆ ಉದ್ದೇಶಕ್ಕಾಗಿ ಉಪಯೋಗ ಮಾಡುವುದಿಲ್ಲ ಎಂದಿದ್ದಾರೆ.
ಇನ್ನೂ, ಈ ಹಿಂದೆಯೇ ಆಯೋಗ ಸಮೀಕ್ಷೆ ನಡೆಸುವ ಮೊದಲೇ ಬಿಟ್ಟು ಹೋದ ಜಾತಿಗಳನ್ನು ಗಮನಕ್ಕೆ ತನ್ನಿ ಎಂದು ಜಾಗೃತಿ ಮೂಡಿಸುವ ಪ್ರಕಟನೆಯೊಂದನ್ನು ಸಾರ್ವಜನಿಕವಾಗಿ ಪ್ರಕಟಿಸಿತ್ತು. ಇದಾದ ನಂತರ ಅನೇಕರು ತಮ್ಮ ಜಾತಿಗಳನ್ನು ಪರಿಗಣಿಸುವಂತೆ ಕೋರಿದ್ದರು. ಅದರಂತೆ 148 ಜಾತಿಗಳನ್ನು ಸಮೀಕ್ಷೆಯಲ್ಲಿ ಸೇರಿಸಲಾಗಿದೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ ಎಂದು ತಿಳಿಸಿದ್ದಾರೆ.
ನಾಳೆಯಿಂದ ಸಮೀಕ್ಷೆ ಆರಂಭ ! ?
ರಾಜ್ಯ ಸರ್ಕಾರ ನಾಳೆಯಿಂದ (ಸೆ.22) ರಾಜ್ಯಾದ್ಯಂತ ಹೊಸದೊಂದು ಸಮೀಕ್ಷೆಗೆ ಚಾಲನೆ ನೀಡಲಿದೆ. ಹಿಂದುಳಿದ ಆಯೋಗ ಮೂಲಕ ಶೈಕ್ಷಣಿಕ ಆರ್ಥಿಕ ಸಮೀಕ್ಷೆಗೆ ಸಿದ್ಧತೆ ಆಗಿದ್ದು, ಸೋಮವಾರದಿಂದ ಮನೆಮನೆ ಬಾಗಿಲಿಗೆ ಸಮೀಕ್ಷೆ ಸಿಬ್ಬಂದಿ ಬರಲಿದ್ದಾರೆ.
ಈ ಬಗ್ಗೆ ಹಿಂದುಳಿದ ಆಯೋಗ ಕೂಡ ಈಗಾಗಲೇ ಎಲ್ಲಾ ತಯಾರಿ ಮಾಡಿಕೊಂಡಿದ್ದು, ಇದಕ್ಕಾಗಿ ಶಿಕ್ಷಕರು, ಕಂದಾಯ ಇಲಾಖೆಯ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಸಮೀಕ್ಷೆಯನ್ನ ಸಂಪೂರ್ಣ ಡಿಜಿಟಲ್ ಮಾದರಿಯಲ್ಲಿ ಯಾವ ರೀತಿಯಲ್ಲಿ ಮಾಡಬೇಕು ಎಂಬುದನ್ನು ತರಬೇತಿ ನೀಡಲಾಗಿದೆ.
ಬೆಂಗಳೂರಿನಲ್ಲ ಕೊಂಚ ವಿಳಂಬ..!
ಬೆಂಗಳೂರಿನಲ್ಲಿ ಎರಡು ಮೂರು ದಿನ ಸಮೀಕ್ಷೆ ತಡವಾಗಿ ಆರಂಭ ಆಗಲಿದೆ. ತರಬೇತಿ ನೀಡುವುದಕ್ಕೆ ಒಂದು ವಾರ ತಡವಾಗಿದೆ. ಜತೆಗೆ, ಜಿಬಿಎ ನೊಟಿಫಿಕೇಷನ್ ತಡ ಆಗಿದ್ದರಿಂದ ಇಲ್ಲಿ ತಡ ಆಗಿದೆ.
ಬೆಂಗಳೂರು ನಗರದಲ್ಲಿ ಹೆಚ್ಚುವರಿ ಸಿಬ್ಬಂದಿ ನೇಮಿಸಲಾಗಿದೆ.ಬೇರೆ ಇಲಾಖೆಯಿಂದಲೂ ನೇಮಕ ಮಾಡಲಾಗಿದೆ ಎಂದು ಮಧುಸೂದನ್ ಹೇಳಿದ್ದಾರೆ.


















