ಧಾರವಾಡ: ಮೂರು ಸಾವಿರ ಲೈನ್ಮನ್ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲಿ ಪೂರ್ಣಗೊಳ್ಳಲಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಜಾರ್ಜ್, ಎಲ್ಲ ವಿದ್ಯುತ್ ಕಂಪನಿಗಳಿಗೂ (ಮೆಸ್ಕಾಂ, ಹೆಸ್ಕಾಂ, ಜೆಸ್ಕಾಂ, ಸೆಸ್ಟ್.) ಲೈನ್ಮನ್ಗಳನ್ನು ಒದಗಿಸಲಾಗುವುದು. ನೇಮಕವಾದವರು 10 ವರ್ಷ ಒಂದೇ ಕಂಪನಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ನಿಯಮ ರೂಪಿಸಲಾಗಿದೆ’ ಎಂದಿದ್ದಾರೆ.
‘ಶರಾವತಿ ವಿದ್ಯುತ್ ಘಟಕದಲ್ಲಿ ‘ಪಂಪ್ ಸ್ಟೋರೇಜ್’ ವ್ಯವಸ್ಥೆಗೆ ಉದ್ದೇಶಿಸಲಾಗಿದೆ. ಇದನ್ನು ಸ್ಥಾಪಿಸಲು 52 ಹೆಕ್ಟೇರ್ ಜಾಗ ಬೇಕು. ಪಂಪ್ ಸ್ಟೋರೇಜ್ನಿಂದ ಎರಡು ಸಾವಿರ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಹೆಚ್ಚಲಿದೆ’ ಎಂದು ತಿಳಿಸಿದ್ದಾರೆ.
‘ಸಿಸಿ’ (ಕಟ್ಟಡ ನಿರ್ಮಾಣ ಅನುಮತಿ ಪತ್ರ) ಹಾಗೂ ‘ಒಸಿ’ (ಕಟ್ಟಡ ಸ್ವಾಧೀನಾನುಭವ ಪತ್ರ) ಇಲ್ಲದ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದಕ್ಕೆ ಸಂಬಂಧಿಸಿದಂತೆ ಸಂಪುಟ ಸಭೆ ನಿರ್ಧಾರ ಕೈಗೊಳ್ಳಲಿದೆ. ‘ಒಸಿ’, ‘ಸಿಸಿ’ ಇಲ್ಲದ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕದ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಲಾಗಿದೆ. ಸಂಪುಟದಲ್ಲಿ ಕೈಗೊಳ್ಳುವ ನಿರ್ಧಾರದಂತೆ ಇಲಾಖೆ ಕ್ರಮ ವಹಿಸಲಿದೆ’ ಎಂದು ಹೇಳಿದ್ದಾರೆ.
‘ಕಟ್ಟಡಕ್ಕೆ ತಾತ್ಕಾಲಿಕ ವಿದ್ಯುತ್ ಸಂಪರ್ಕಕ್ಕೆ ‘ಸಿಸಿ’ (ಕಟ್ಟಡ ನಿರ್ಮಾಣ ಅನುಮತಿ ಪತ್ರ) ಮತ್ತು ಶಾಶ್ವತ ಸಂಪರ್ಕಕ್ಕೆ ‘ಒಸಿ’ ಶಾಶ್ವತ ಸಂಪರ್ಕಕ್ಕೆ (ಒಸಿ) ಇರಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ‘ಒಸಿ’, ‘ಸಿಸಿ’ ಇಲ್ಲದವರಿಗೆ ಸಂಪರ್ಕ ನೀಡದಂತೆ ಮುಖ್ಯಕಾರ್ಯದರ್ಶಿ ಇಂಧನ ಇಲಾಖೆಗೆ ಸೂಚನೆ ನೀಡಿದ್ದಾರೆ’ ಎಂದು ತಿಳಿಸಿದ್ದಾರೆ.
‘ರಾಷ್ಟ್ರೀಯ ವಿದ್ಯುತ್ ‘ಗ್ರೀಡ್’ ಬಹಳ ಮುಖ್ಯವಾದುದು. ಈ ಗ್ರಿಡ್ ಮೂಲಕ ಪಂಜಾಬ್, ಉತ್ತರ ಪ್ರದೇಶಗಳಿಂದ ಈ ಭಾಗಕ್ಕೆ ವಿದ್ಯುತ್ ಪೂರೈಸಲಾಗುತ್ತದೆ. ‘ತಮ್ಮಾರ್ ವಿದ್ಯುತ್ ಯೋಜನೆಗೆ ತಡೆ ಮಾಡುವುದು ಸರಿಯಲ್ಲ. ಮಹಾದಾಯಿ ಯೋಜನೆಗಾಗಿ ಒತ್ತಡವನ್ನು ಹೇರುತ್ತೇವೆ’ ಎಂದು ಪ್ರತಿಕ್ರಿಯಿಸಿದ್ದಾರೆ.