ಜಮ್ಮು: ಭಾರತ-ಪಾಕ್ ನಡುವೆ ಕದನ ವಿರಾಮ ಘೋಷಣೆಯಾಗಿದ್ದರೂ ಉಗ್ರರನ್ನು ಹೆಡೆಮುರಿ ಕಟ್ಟುವ ಕಾರ್ಯ ಪ್ರಗತಿಯಲ್ಲಿದೆ. ಅದರಂತೆ ಮಂಗಳವಾರ ಜಮ್ಮು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ನಡೆದ ಎನ್ಕೌಂಟರ್ನಲ್ಲಿ(Encounter in J&K) ಕನಿಷ್ಠ ಮೂವರು ಲಷ್ಕರ್-ಎ-ತಯ್ಬಾ ಭಯೋತ್ಪಾದಕರನ್ನು ಭದ್ರತಾ ಪಡೆಗಳು ಸದೆಬಡಿದಿವೆ.
ಶೋಪಿಯಾನ್ ಝಿನ್ ಪಾತೇರ್ ಪ್ರದೇಶದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಹತ ಉಗ್ರರಲ್ಲಿ ಸ್ಥಳೀಯ ನಿವಾಸಿ ಶಾಹಿದ್ ಕೂಡ ಒಬ್ಬನಾಗಿದ್ದು, ಈತನ ಗುರುತು ಪತ್ತೆಯಾಗಿದೆ. ಉಳಿದವರ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಬೆಳಗ್ಗೆಯೇ ಝಿನ್ ಪಾತೇರ್ ನಲ್ಲಿ ಅಡಗಿದ್ದ ಮೂವರು ಲಷ್ಕರ್ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ಆರಂಭವಾಗಿತ್ತು. ಹಲವು ಗಂಟೆಗಳ ಕಾಲ ಚಕಮಕಿ ನಡೆದಿದ್ದು, ಕೊನೆಗೆ ಎಲ್ಲ ಮೂವರು ಉಗ್ರರನ್ನೂ ಹೊಡೆದುರುಳಿಸುವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾಗಿವೆ ಎಂದು ಸೇನಾಮೂಲಗಳು ತಿಳಿಸಿವೆ.
ಏಪ್ರಿಲ್ 22 ಪಹಲ್ಗಾಮ್ ಉಗ್ರರ ದಾಳಿಗೆ ಕಾರಣರಾದ ಪಾಕ್ ಮೂಲದ ಭಯೋತ್ಪಾದಕರಾದ ಆದಿಲ್ ಹುಸೇನ್ ಥೋಕರ್, ಅಲಿ ಭಾಯಿ ಮತ್ತು ಹಶೀಂ ಮೂಸಾರ ಭಾವಚಿತ್ರಗಳುಳ್ಳ ಪೋಸ್ಟರ್ ಗಳನ್ನು ಭದ್ರತಾ ಪಡೆಗಳು ಕಾಶ್ಮೀರದೆಲ್ಲೆಡೆ ಅಂಟಿಸಿ, ಅವರ ಬಗ್ಗೆ ಮಾಹಿತಿ ನೀಡಿದವರಿಗೆ 20 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಿತ್ತು. ಇದಾದ ಕೆಲವೇ ಗಂಟೆಗಳಲ್ಲಿ ಈ ಎನ್ಕೌಂಟರ್ ನಡೆದಿದೆ.
ಪಹಲ್ಗಾಮ್ ದಾಳಿಯ ಬೆನ್ನಲ್ಲೇ ಜಮ್ಮು ಕಾಶ್ಮೀರ ಅಧಿಕಾರಿಗಳು ಸುಧಾರಿತ ಸ್ಫೋಟಕಗಳನ್ನು ಬಳಸಿಕೊಂಡು ಥೋಕರ್ ಸೇರಿದಂತೆ ಹಲವು ಶಂಕಿತ ಉಗ್ರರ ಮನೆಗಳನ್ನು ಧ್ವಂಸಗೊಳಿಸಿದ್ದರು.