ಕೋಲ್ಕತ್ತಾ: ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆಯ ಬೆನ್ನಲ್ಲೇ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಗಲಭೆಯಲ್ಲಿ 3 ಮಂದಿ ಸಾವಿಗೀಡಾಗಿ, ಹಲವರು ಗಾಯಗೊಂಡಿದ್ದಾರೆ(West Bengal Waqf Violence). ಅತಿಹೆಚ್ಚು ಹಿಂಸಾಚಾರಕ್ಕೆ ಸಾಕ್ಷಿಯಾದ ಮುರ್ಷಿದಾಬಾದ್ ಜಿಲ್ಲೆ ಸಂಪೂರ್ಣವಾಗಿ ಹೊತ್ತಿ ಉರಿದಿದೆ. ಎಲ್ಲೆಲ್ಲೂ ಸುಟ್ಟು ಕರಕಲಾದ ಕಟ್ಟಡಗಳು, ವಾಹನಗಳೇ ಕಾಣಸಿಗುತ್ತಿವೆ.
ಸೂಕ್ಷ್ಮ ಪ್ರದೇಶಗಳಲ್ಲಿ ಅರೆಸೇನಾ ಪಡೆಗಳನ್ನು ನಿಯೋಜಿಸುವಂತೆ ಕಲ್ಕತ್ತಾ ಹೈಕೋರ್ಟ್ ಆದೇಶಿಸಿದ್ದು, ಇಂಥ ದಾಂದಲೆಗಳು ನಡೆಯುವಾಗ ನಾವು ಕಣ್ಣು ಮುಚ್ಚಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದೆ.
ಶುಕ್ರವಾರದ ನಮಾಜ್ ಬಳಿಕ ಪ.ಬಂಗಾಳದಾದ್ಯಂತ ವಕ್ಫ್ ಕಾಯ್ದೆ ವಿರೋಧಿಸಿ ಮುಸ್ಲಿಮರು ಬೀದಿಗಿಳಿದಿದ್ದು, ಈ ಪ್ರತಿಭಟನೆಯು ಹಿಂಸಾರೂಪ ಪಡೆದಿತ್ತು. ಶನಿವಾರವೂ ಹಿಂಸಾಚಾರ ಮುಂದುವರಿದು, ಪೊಲೀಸರ ಮೇಲೂ ಕಲ್ಲುತೂರಾಟ ನಡೆಸಿದ ಉದ್ರಿಕ್ತರು, ಹಲವು ವಾಹನಗಳಿಗೆ ಬೆಂಕಿ ಹಚ್ಚಿದ್ದರು. ಈ ಸಂದರ್ಭದಲ್ಲಿ ಮೂರು ಮಂದಿ ಮೃತಪಟ್ಟಿದ್ದು, ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಈವರೆಗೆ 150ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳದ ಪ್ರತಿಪಕ್ಷ ನಾಯಕ ಸುವೇಂದು ಅಧಿಕಾರಿ, ರಾಜ್ಯದಲ್ಲಿ ಹಿಂದೂಗಳು ಸುರಕ್ಷಿತವಾಗಿಲ್ಲ ಎಂದು ಹೇಳಿದ್ದಾರೆ. ಇನ್ನೊಂದು ಕಡೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶಾಂತಿ ಕಾಪಾಡುವಂತೆ ಕರೆ ನೀಡಿದ್ದು, ಕೆಲವು ರಾಜಕೀಯ ಪಕ್ಷಗಳು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಧರ್ಮಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ. ಇವುಗಳಿಗೆ ಯಾರೂ ಮಾರುಹೋಗಬಾರದು ಎಂದು ತಿಳಿಸಿದ್ದಾರೆ. ಅಲ್ಲದೇ, ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ವಕ್ಫ್ ಕಾಯ್ದೆಯನ್ನು ಜಾರಿ ಮಾಡುವುದಿಲ್ಲ ಎಂದೂ ಘೋಷಿಸಿದ್ದಾರೆ.

ನಿಷೇಧಾಜ್ಞೆ ಮುಂದುವರಿಕೆ
ಹಿಂಸಾಚಾರದ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದಲೂ ಪ.ಬಂಗಾಳದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ. ನಕಲಿ ಹಾಗೂ ಸುಳ್ಳು ಸುದ್ದಿಗಳನ್ನು ತಡೆಯುವ ಸಲುವಾಗಿ ಅಂತರ್ಜಾಲ ಸೇವೆಗಳನ್ನೂ ಸ್ಥಗಿತಗೊಳಿಸಲಾಗಿದೆ. ವದಂತಿಗಳೇ ಹಿಂಸಾಚಾರ ಹೆಚ್ಚಲು ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಹಿಂಸಾಚಾರಪೀಡಿತ ಮುರ್ಷಿದಾಬಾದ್ ನಲ್ಲಿ 300 ಬಿಎಸ್ಎಫ್ ಸಿಬ್ಬಂದಿಯನ್ನು ನಿಯೋಜಿಸುವುದರ ಜೊತೆಗೆ, ಸರ್ಕಾರದ ಕೋರಿಕೆಯ ಮೇರೆಗೆ ಹೆಚ್ಚುವರಿಯಾಗಿ ಬಿಎಸ್ಎಫ್ನ 5 ಕಂಪನಿಗಳನ್ನು ನಿಯೋಜಿಸಲಾಗಿದೆ. ಇವರು ರಾತ್ರಿ ಪೂರ್ತಿ ಗಸ್ತು ತಿರುಗುತ್ತಿದ್ದಾರೆ. ಶುಕ್ರವಾರ ಗಲಭೆ ಆರಂಭವಾದ ಮೊದಲ ಮೂರು ಗಂಟೆಗಳಲ್ಲಿ ಪೊಲೀಸರ ಸುಳಿವೇ ಇರಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಧುಲಿಯಾನ್ ಪ್ರದೇಶದಲ್ಲಿ ಕನಿಷ್ಠ 35 ಹಿಂದೂಗಳ ಮಳಿಗೆಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಬಿಜೆಪಿ ನಾಯಕ ಸುವೇಂದು ಅಧಿಕಾರಿ ಆರೋಪಿಸಿದ್ದಾರೆ.
ಅಪ್ಪ-ಮಗನ ಕೊಲೆ
ಶನಿವಾರ ನಡೆದ ಹಿಂಸಾಚಾರದ ವೇಳೆ ಹರಗೋವಿಂದ್ ದಾಸ್ ಮತ್ತು ಅವರ ಪುತ್ರ ಚಂದನ್ ದಾಸ್ ರನ್ನು ಉದ್ರಿಕ್ತರ ಗುಂಪೊಂದು ಹಲ್ಲೆಗೈದು, ಕೊಲೆ ಮಾಡಿದೆ ಎಂದು ಆರೋಪಿಸಲಾಗಿದೆ. ಇನ್ನೊಂದು ಕಡೆ ಪೊಲೀಸರು ಹಾರಿಸಿದ ಗುಂಡಿಗೆ ಇಜಾಝ್ ಅಹ್ಮದ್ ಸೇಖ್ ಎಂಬ 17 ವರ್ಷದ ಯುವಕ ಸಾವಿಗೀಡಾಗಿದ್ದಾನೆ ಎಂದು ವರದಿಯಾಗಿದೆ. ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ, ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ಸುಕಾಂತಾ ಮಜುಮ್ದಾರ್ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಹರಿಹಾಯ್ದಿದ್ದಾರೆ. ರಾಜ್ಯದಲ್ಲಿ ವಕ್ಫ್ ಗಲಭೆ ಉಂಟಾಗಲು ಮಮತಾರ ಓಲೈಕೆ ರಾಜಕಾರಣವೇ ಕಾರಣ ಎಂದು ಆರೋಪಿಸಿದ್ದಾರೆ. ಮಮತಾಗೆ ರಾಜ್ಯವನ್ನು ಆಳುವ ಅರ್ಹತೆ ಇಲ್ಲ. ಪೊಲೀಸರು ಅವರ ನಿಯಂತ್ರಣದಲ್ಲಿದ್ದಾರೆ. ಹಿಂದೂಗಳ ಮನೆಗೆ ನುಗ್ಗಲು, ದಾಂದಲೆ ನಡೆಸಲು, ಲೂಟಿ ಮಾಡಲು ಮುಸ್ಲಿಮರಿಗೆ ಮುಕ್ತ ಅವಕಾಶವನ್ನು ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.