ಧರ್ಮದ ಅಫೀಮಿನ ಮದವೇರಿರುವ ರಣಹೇಡಿಗಳಿಗೊಂದು ಧಿಕ್ಕಾರವಿರಲಿ. ನೇರಾನೇರ ಯುದ್ಧ ಮಾಡುವ ನರವಿಲ್ಲದವರ ರಕ್ತದೋಕುಳಿಯನ್ನ ಯಾವ ಧರ್ಮವೂ ಬೆಂಬಲಿಸೋದಿಲ್ಲ, ಪುರಸ್ಕರಿಸುವುದಿಲ್ಲ. ಶಾಂತವಾಗಿದ್ದ ಶ್ವೇತ ಸುಂದರಿಯ ಗರ್ಭದಲ್ಲೇ ನೆತ್ತರ ಓಕಳಿ ಆಡಿದವರ ನಾಮಾವಷೇಶವಾಗಬೇಕಿದೆ. ಆಗಲೇ ಈ ಉಗ್ರವಾದವೆನ್ನೋ ವಿಷಜಂತುವಿನ ಸಂಹಾರವಾಗಲಿದೆ.
ಕಾಡಿನಲ್ಲಿ ಅವಿತು ಕುಳಿತವರಿಂದ ನರಮೇಧ
ಮಟಮಟ ಮಧ್ಯಾಹ್ನ 3 ಗಂಟೆ….ಹೇಳ ಕೇಳಿ ಕಾಶ್ಮೀರದ ಅನಂತ್ ನಾಗ್ ಜಿಲ್ಲೆ…ಸುತ್ತಲೂ ಶ್ವೇತವರ್ಣದ ಮಂಜು ಆವರಿಸಿದ್ರೆ ಕಣ್ಣು ಹಾಯಿಸಿದಲ್ಲೆಲ್ಲಾ ಹಚ್ಚ ಹಸಿರ ಸೀರೆಯುಟ್ಟಂಥಾ ಪ್ರಕೃತಿಯ ಸಿರಿ ಸೊಬಗು…ಭಾರತದ ಸ್ವಿಜ್ಜರ್ ಲೆಂಡ್ ಅಂತಲೇ ಕರೆಸಿಕೊಳ್ಳುವ ಭೂಲೋಕದ ಸ್ವರ್ಗ ಈ ಪಹಲ್ಗಾಮ್…ಅಲ್ಲೆಂದರಲ್ಲಿ ಚದುರಿ ಹೋಗಿದ್ದ ಪ್ರವಾಸಿಗರ ದಂಡು…ಬೇಸಿಗೆ ರಜೆಗೆ ಬಂದವರು ಕೆಲವರಾದ್ರೆ, ಹನುಮೂನ್ ಗೆ ಅಂತಾ ಬಂದವರು ಮತ್ತೆ ಕೆಲವರು…ಪುಟ್ಟ ಕಂದಮ್ಮಗಳಿಂದ ಹಿಡಿದು ವಯೋವೃದ್ಧರವರೆಗಿನ ತಲೆಮಾರುಗಳು ಅಲ್ಲಿ ಉಸಿರಾಡುತಿದ್ವು..ಆದ್ರೆ ಕೊರೆಯುವ ಚಳಿಯಲ್ಲಿ ಈ ಪ್ರವಾಸಿಗರ ಬಿಸಿ ಉಸಿರಲ್ಲೇ ಬೆಚ್ಚಗೆ ಕೂತಿದ್ದ ಕಿರಾತಕರು ಮುಂದೆ ನಡೆಸಿದ್ದು ಅಕ್ಷರಶ ಮರಣ ಮೃದಂಗ.
ಪತ್ನಿ, ಕಂದಮ್ಮಗಳ ಮುಂದೆಯೇ ಹಾರಿ ಹೋದವು ಜೀವ
ಧರ್ಮದ ಹೆಸರಲ್ಲೇ ಯುದ್ಧ ಸಾರಿದ್ದ ಪಾಪಿಗಳು ಬೈಸರನ್ ಹುಲ್ಲುಗಾವಲಿನಲ್ಲಿ ಸ್ವಚ್ಛಂದವಾಗಿ ಓಡಾಡುತ್ತಿದ್ದವರನ್ನು ಸುತ್ತುವರೆದಿದ್ದಾರೆ. ಸೇನಾ ಸಮವಸ್ತ್ರ ಧರಿಸಿದ್ದ ಐವರು ಶಸ್ತ್ರಸಜ್ಜಿತ ಜಿಹಾದಿ ಕ್ರಿಮಿಗಳು ಎದ್ವಾತದ್ವಾ ಗುಂಡಿನ ಮಳೆ ಗೈದಿದ್ದಾರೆ. ಅಷ್ಟೇ ನೋಡ ನೋಡುತ್ತಿದ್ದಂತೆ ಹಚ್ಚ ಹಸಿರ ಹುಲ್ಲುಗಾವಲು ರಕ್ತಸಿಕ್ತವಾಗಿ ಹೋಗಿದೆ. ಅತ್ಯಾಧುನಿಕ ಅಸ್ತ್ರಗಳೊಟ್ಟಿಗೆ ದಾಂಗುಡಿ ಇಟ್ಟ ಪರಮ ಪಾಪಿಗಳು, ಅಲ್ಲಿದ್ದವರ ಬಟ್ಟೆ ಬಿಚ್ಚಿಸಿ ಮುಸ್ಲಿಂ ಅಲ್ಲಾ ಅನ್ನೋದನ್ನು ಖಚಿತ ಪಡಿಸಿಕೊಂಡೇ ನೇರ ನೆತ್ತಿಗೆ ಗುಂಡಿಟ್ಟಿದ್ದಾರೆ. ತಮ್ಮವರನ್ನು ಬಿಟ್ಟುಬಿಡುವಂತೆ ಪರಿಪರಿಯಾಗಿ ಗೋಗರೆದ್ರೂ ಕರಗದ ರಾಕ್ಷಸ ಮನಸಸುಗಳು ಪುಟ್ಟ ಕಂದಮ್ಮಗಳ ಮುಂದೆಯೇ ರಣಕೇಕೆ ಹಾಕಿದ್ದಾರೆ.
ಪಹಲ್ಗಾಮ್ ನಲ್ಲಿ ಕನ್ನಡಿಗರಿಬ್ಬರ ಬರ್ಬರ ಹತ್ಯೆ
ಪಹಲ್ಗಾಮ್ ನ ಉಗ್ರರ ನರಮೇಧದಲ್ಲಿ ಇಬ್ಬರು ಕನ್ನಡಿಗರು ಬಲಿಯಾಗಿದ್ದಾರೆ. ಶಿವಮೊಗ್ಗದ ಉದ್ಯಮಿ ಮಂಜುನಾಥ್ ರಾವ್ ಪ್ರಾಣತೆತ್ತಿದ್ದಾರೆ. ಮಗನಿಗಾಗಿ ತಿಂಡಿ ತರಲು ಹೋಗಿದ್ದ ಮಂಜುನಾಥ್ ಉಗ್ರರ ಚಕ್ರವ್ಯೂಹದಲ್ಲಿ ಸಿಲುಕಿದ್ರು. ಧರ್ಮವನ್ನು ಖಚಿತ ಪಡಿಸಿಕೊಂಡೇ ಗುಂಡಿನ ದಾಳಿ ನಡೆಸಿದ್ದಾರೆ. ಇದೇ ವೇಳೆ ಮಂಜುನಾಥ್ ಪತ್ನಿ ಪಲ್ಲವಿ, ತಾನು ಹಾಗೂ ಮಗನನ್ನೂ ಕೊಂದು ಬಿಡಿ ಅಂತಾ ಕಣ್ಣೀರಿಟ್ಟಿದ್ದಾರೆ. ಆದ್ರೆ ದುರಂಹಕಾರ ಮೆರೆದಿರೋ ಉಗ್ರರು ಹೋಗಿ ಮೋದಿಗೆ ಹೇಳು ಅಂತಾ ಹೇಳಿ ಹೊರಟಿದ್ದಾರೆ. ಇನ್ನು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಮೂಲದ ಭರತ್ ಭೂಷಣ್ ಕೂಡಾ ಉಗ್ರರ ಗುಂಡಿಗೆ ಜೀವ ತೆತ್ತಿದ್ದಾರೆ.
ಪತ್ನಿ, ಪುತ್ರನೊಟ್ಟಿಗೆ ಬೆಂಗಳೂರಿನ ಜೆಪಿ ಪಾರ್ಕ್ ನಲ್ಲಿ ನೆಲೆಸಿದ್ದ ಭೂಷಣ್ ಕುಟುಂಬ ಕೆಲ ದಿನಗಳ ಹಿಂದಷ್ಟೇ ಬೇಸಿಗೆ ರಜೆ ಕಳೆಯಲು ಕಾಶ್ಮೀರಕ್ಕೆ ಆಗಮಿಸಿತ್ತು. ಆದ್ರೆ ಮತಾಂಧರ ವಕ್ರದೃಷ್ಟಿಗೆ ಅಮಾಯಕ ಜೀವವಿಂದು ಬಲಿಯಾಗಿದೆ. ಭೂಷಣ್ ರನ್ನು ಸುತ್ತವರಿದ ಉಗ್ರ…. ಜಾತಿಯಾವುದು ಅಂತಾ ಪ್ರಶ್ನಿಸಿದ್ದಾನೆ. ಹಿಂದೂ ಎನ್ನುತ್ತಿದ್ದಂತೆ ನೇರ ಹಣೆಗೆ ಗುಂಡಿಕ್ಕಿದ್ದಾನೆ. ಅಷ್ಟೇ, ಇತ್ತ ಜೀವ ಉಳಿಸಿಕೊಳ್ಳಲು ಪತ್ನಿ ಸುಜಾತ ಮೂರು ವರ್ಷದ ಕಂದಮ್ಮನ್ನು ಎತ್ತಿಕೊಂಡು ಸ್ವಲ್ಪ ದೂರ ಓಡಿದ್ದಾರೆ. ಇತ್ತ ಉಗ್ರರು ತಮ್ಮ ಕಾರ್ಯ ಸಾಧಿಸಿ ಪರಾರಿಯಾಗಿದ್ದಾರೆ.
ಉಗ್ರವಾದವೆನ್ನೋ ವಿಷ ಸರ್ಪದ ಸಂಹಾರದ ಸಂಕಲ್ಪ
ಕಾಶ್ಮೀರ ಕಣಿವೆಯ ಇತಿಹಾಸದಲ್ಲೇ ಪ್ರವಾಸಿಗರ ಮೇಲೆ ನಡೆದ ಘನಘೋರ ದಾಳಿ ಇದಾಗಿದೆ. ಆರ್ಟಿಕಲ್ 370 ರದ್ದಿನ ಬಳಿಕ ನಡೆದ ಅತಿದೊಡ್ಡ ಹುನ್ನಾರದ ವಿರುದ್ಧವೀಗ ಭಾರತ ನಿಗಿನಿಗಿ ಕೆಂಡವಾಗಿದೆ. ಈಗಾಗಲೇ ದಾಳಿಯ ಹೊಣೆಯನ್ನು ಲಷ್ಕರ್ ಸಂಘಟನೆಯ ಅಧೀನ ಸಂಘಟನೆಯಾಗಿರುವ ದ ರೆಸಿಸ್ಟನ್ಸ್ ಫ್ರಂಟ್ ಸಂಘಟನೆ ಹೊತ್ತುಕೊಂಡಿದೆ. ಈಗಾಗಲೇ ಉಗ್ರವಾದವನ್ನೇ ಬುಡಸಹಿತ ಕಿತ್ತೊಗೆಯೋ ಸಂಕಲ್ಪ ಮಾಡಿರೋ ಪ್ರಧಾನಿ ಮೋದಿ, ಈ ಘಟನೆಯನ್ನೆಂದಿಗೂ ಕ್ಷಮಿಸುವ ಮಾತೇ ಇಲ್ಲಾ ಎಂದಿದ್ದಾರೆ.
ಈ ನಡುವೆ ನಿನ್ನೆ ರಾತ್ರಿಯೇ ಗೃಹ ಸಚಿವ ಅಮಿತ್ ಕಾಶ್ಮೀರಕ್ಕೆ ತೆರಳಿದ್ದು, ಮೋದಿ ಕೂಡಾ ಸೌದಿ ಪ್ರವಾಸ ಮೊಟಕುಗೊಳಿಸಿ ವಾಪಸ್ ಆಗ್ತಿದ್ದಾರೆ. ಮುಂಬೈ ದಾಳಿ ಕೋರ ತಹಾವುರ್ ರಾಣಾ ಗಡಿಪಾರಿಗೆ ಪ್ರತೀಕಾರವೇ ಈ ರಕ್ತಸಿಕ್ತ ಅಧ್ಯಾಯ ಎನ್ನಲಾಗ್ತಿದೆ. ಅದೇನೇ ಇರಲಿ…ಶಾಂತ ಮಣ್ಣಲ್ಲಿ ನೆತ್ತರ ಕೋಡಿ ಹರಿಸಿದ ಮತಾಂಧರ ನಾಮಾವಷೇಷವಾಗೋವರೆಗೂ ಸಮಸ್ತ ಭಾರತ ನಿದ್ರಿಸೋದಿಲ್ಲ.