ಬ್ಯಾಂಕ್ ಗೆ ವಂಚಿಸಿ 20 ವರ್ಷಗಳಿಂದಲೂ ತಲೆ ಮರೆಸಿಕೊಂಡಿದ್ದವನನ್ನು ಕೊನೆಗೂ ಕೇಂದ್ರ ತನಿಖಾ ದಳ(ಸಿಬಿಐ) ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಆರೋಪಿ ವಿ ಛಲಪತಿ ರಾವ್ ಎಂಬಾತನನ್ನೇ ಅಧಿಕಾರಿಗಳು 20 ವರ್ಷಗಳ ನಂತರ ಅರೆಸ್ಟ್ ಮಾಡಿದ್ದಾರೆ. ಆರೋಪಿಯು ಗುರುತು, ಸ್ಥಳ ಮರೆಮಾಚಿ ಜೀವನ ನಡೆಸುತ್ತಿದ್ದ. ಈತ ಕಂಪ್ಯೂಟರ್ ಆಪರೇಟರ್ ನಿಂದ ಹಿಡಿದು ಸ್ವಾಮೀಜಿಯವರೆಗೂ ನಾನಾ ವೇಷ ಧರಿಸಿದ್ದ. ಆದರೂ ಬಿಡದೆ ಸಿಬಿಐ ಕೊನೆಗೂ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
2002ರಲ್ಲಿ ಹೈದಾರಾಬಾದ್ನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಚಂದುಲಾಲ್ ಬಿರಾದಾರ್ ಶಾಖೆಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಈತ ಕಾರ್ಯನಿರ್ವಹಿಸುತ್ತಿದ್ದ. ಆ ವೇಳೆ ಬ್ಯಾಂಕ್ ಗೆ 50 ಲಕ್ಷ ರೂ. ವಂಚಿಸಿದ್ದ. ಹೀಗಾಗಿ ತನಿಖೆ ಕೈಗೊಂಡಿದ್ದ ಸಿಬಿಐ 2006ರಲ್ಲಿ ಎರಡು ಚಾರ್ಜ್ ಶೀಟ್ ಗಳನ್ನು ಸಲ್ಲಿಸಿತ್ತು. ಆನಂತರ ಪ್ರಕರಣದ ಆರೋಪಿಯಾಗಿರುವ ಛಲಪತಿ ನಾಪತ್ತೆಯಾಗಿದ್ದಾರೆಂದು ಅವರ ಪತ್ನಿ ದೂರು ದಾಖಲಿಸಿದ್ದರು.
7 ವರ್ಷಗಳ ಹಿಂದೆ ಪತಿ ಸಾವನ್ನಪ್ಪಿದ್ದಾರೆಂದು ಹೇಳಿ ಸಿವಿಲ್ ನ್ಯಾಯಾಲಯದಲ್ಲಿ ಅರ್ಜಿಸಲ್ಲಿಸಿದ್ದರು. ಹೈದರಾಬಾದ್ ನ್ಯಾಯಾಲಯ ಅವರ ಪರವಾಗಿ ಆದೇಶ ನೀಡಿತ್ತು. ಹೀಗಾಗಿ ಪತಿಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ತೆಲಂಗಾಣ ಹೈಕೋರ್ಟ್ ನಿಂದ ತಡೆಯಾಜ್ಞೆ ಪಡೆದಿದ್ದರು. ಆ ವೇಳೆ 2013ರಲ್ಲಿ ಸಿಬಿಐ ನ್ಯಾಯಾಲಯ ಛಲಪತಿಯನ್ನು ಘೋಷಿತ ಅಪರಾಧಿ ಎಂದಿತು. ಈತ ಮಾತ್ರ ಸೇಲಂಗೆ ಓಡಿಹೋಗಿ ತನ್ನ ಹೆಸರನ್ನು ಎಂ ವಿನೀತ್ ಕುಮಾರ್ ಎಂದು ಬದಲಾಯಿಸಿ, ಆಧಾರ್ ಸಂಖ್ಯೆಯನ್ನು ಪಡೆದುಕೊಂಡಿದ್ದ. ಆನಂತರ 2007ರಲ್ಲಿ ಬೇರೊಬ್ಬ ಮಹಿಳೆಯನ್ನು ವಿವಾಹವಾಗಿದ್ದ. ಆದರೆ ಮೊದಲ ಮಗನ ಜತೆ ಸಂಪರ್ಕದಲ್ಲಿ ಎಂದು ಎರಡನೇ ಪತ್ನಿ ತಿಳಿಸಿದ್ದಾರೆ.
ಸಿಬಿಐ ಪತ್ತೆ ಹಚ್ಚಲು ಪ್ರಯತ್ನಿಸಿದಾಗ, ಚಲಪತಿ ಅವರು 2014 ರಲ್ಲಿ ಸೇಲಂನಿಂದ ಪಲಾಯನ ಮಾಡಿದ್ದ. ನಂತರ ಭೋಪಾಲ್ ಗೆ ತೆರಳಿ ಅಲ್ಲಿ ಸಾಲ ವಸೂಲಾತಿ ಏಜೆಂಟ್ ಆಗಿ ಕೆಲಸ ಮಾಡಿದ್ದ. ನಂತರ ಉತ್ತರಾಖಂಡದ ರುದ್ರಪುರ ಶಾಲೆಯೊಂದರಲ್ಲಿ ಕೆಲಸ ಮಾಡಿದ್ದಾನೆ. 2016 ರಲ್ಲಿ ಔರಂಗಾಬಾದ್ನ ಆಶ್ರಮಕ್ಕೆ ತೆರಳಿದ. ಅಲ್ಲಿ ತಮ್ಮ ಹೆಸರು ಸ್ವಾಮಿ ವಿಧಿತಾತ್ಮಾನಂದ ತೀರ್ಥ ಎಂದು ಬದಲಾಯಿಸಿಕೊಂಡ. ಆ ವೇಳೆ ಮತ್ತೊಂದು ಆಧಾರ್ ಕಾರ್ಡ್ ಪಡೆದುಕೊಂಡ. 2021ರಲ್ಲಿ ಆಶ್ರಮದಲ್ಲಿ 70 ಲಕ್ಷ ರೂ. ವಂಚಿಸಿದ್ದ. ಆದರೂ ತನಿಖೆ ಕೈ ಬಿಡದ ಸಿಬಿಐ ಮಾತ್ರ ಆರೋಪಿಯನ್ನು ಬಂಧಿಸಿ, ಆಗಸ್ಟ್ 16 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.