ಬೆಂಗಳೂರು: ಇತ್ತೀಚೆಗೆ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಎಷ್ಟೇ ಎಚ್ಚರ ವಹಿಸಿದರೂ ವಂಚಕರು ಮಾತ್ರ ಮೋಸ ಮಾಡುತ್ತಲೇ ಇದ್ದಾರೆ.
ಹೀಗಾಗಿ ಬೆಂಗಳೂರಿನಲ್ಲಿ (Bengaluru) ಸೈಬರ್ ಕ್ರೈಂ (Cyber Crime) ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಸೈಬರ್ ಖದೀಮರು, ಬೆಂಗಳೂರಿನ ಟೆಕ್ಕಿಯೊಬ್ಬರಿಗೆ ಹೊಸ ಮೊಬೈಲ್ ಕಳಿಸಿ, ಅದರ ಮೂಲಕ ಸೈಬರ್ ವಂಚಕರು 2.80 ಕೋಟಿ ರೂ. ದೋಚಿ ಪರಾರಿಯಾಗಿದ್ದಾರೆ. ಈ ಮೂಲಕ ಈಗ ಹೊಸ ರೂಪದ ವಂಚನೆಗೆ ವಂಚಕರು ಮುಂದಾಗಿದ್ದಾರೆ.
ಟೆಕ್ಕಿಯೊಬ್ಬರ ವಿಳಾಸಕ್ಕೆ ಸೈಬರ್ ವಂಚಕರು ನೀವು ಹೊಸ ಸಿಮ್ ಖರೀದಿ ಮಾಡಿದ್ದೀರಿ. ಅದಕ್ಕೆ ಗಿಫ್ಟ್ ಎಂದು ಮೊಬೈಲ್ ಕಳುಹಿಸಿದ್ದಾರೆ. ಇದರಿಂದ ಖುಷಿಯಾಗಿರುವ ಟೆಕ್ಕಿ, ಗಿಫ್ಟ್ ಸ್ವೀಕರಿಸಿ ತಮ್ಮ ಸಿಮ್ ನ್ನು ಮೊಬೈಲ್ ನಲ್ಲಿ ಹಾಕಿದ್ದಾರೆ. ಸಿಮ್ ಹಾಕಿದ ಕೆಲವೇ ಗಂಟೆಗಳಲ್ಲಿ ಟೆಕ್ಕಿ ಖಾತೆಯಲ್ಲಿದ್ದ 2.80 ಕೋಟಿ ರೂ. ಹಣವನ್ನು ಖದೀಮರು ತಮ್ಮ ಖಾತೆಗೆ ಜಮಾ ಮಾಡಿಕೊಂಡಿದ್ದಾರೆ.
ಸೈಬರ್ ವಂಚಕರು ಮೊಬೈಲ್ನಲ್ಲಿ ಮೊದಲೇ ಕೆಲವು ಆ್ಯಪ್ಗಳನ್ನು ಇನ್ಸ್ಟಾಲ್ ಮಾಡಿದ್ದಾರೆ. ಟೆಕ್ಕಿ ಮೊಬೈಲ್ ಗೆ ಸಿಮ್ ಹಾಕುತ್ತಿದ್ದಂತೆ ಸಂದೇಶಗಳು ಮತ್ತು ಒಟಿಪಿ ಮೂಲಕ ಟೆಕ್ಕಿಯ ಬ್ಯಾಂಕ್ ಖಾತೆ ಮಾಹಿತಿ ಪಡೆದಿದ್ದಾರೆ. ಆನಂತರ ಟೆಕ್ಕಿಯ ಬ್ಯಾಂಕ್ ಅಕೌಂಟ್ ಸೇರಿದಂತೆ ಎಲ್ಲವನ್ನೂ ಪರಿಶೀಲಿಸಿದ್ದಾರೆ. ಆನಂತರ ಬ್ಯಾಂಕ್ ಎಫ್ ಡಿಯಲ್ಲಿ ಇಟ್ಟಿದ್ದ 2.80 ರೂ. ಹಣವನ್ನು ಖದೀಮರು ಎಗರಿಸಿದ್ದಾರೆ.