ಬೆಂಗಳೂರು: ಪಿಎಸ್ ಐ ಸೇರಿದಂತೆ ಹಲವು ಪೊಲೀಸರನ್ನು ಕರ್ತವ್ಯ ಲೋಪದ ಆಧಾರದಲ್ಲಿ ಅಮಾನತು ಮಾಡಿರುವ ಘಟನೆ ನಡೆದಿದೆ.
ಸುಳ್ಳು ದೂರು ದಾಖಲಿಸಿ ಅಮಾಯಕರನ್ನು ಜೈಲಿಗಟ್ಟಿದ್ದ ಬೆಂಗಳೂರಿನ ಬನಶಂಕರಿ ಠಾಣೆ ಪಿಎಸ್ ಐ ಸೇರಿದಂತೆ ನಾಲ್ವರು ಪೊಲೀಸರನ್ನು ಅಮಾನತು ಮಾಡಲಾಗಿದೆ. ಬನಶಂಕರಿ ಠಾಣೆ ಪಿಎಸ್ ಐ ಶ್ರೀಧರ್ ಗುಗ್ರಿ, ಎಎಸ್ ಐ ಎಸ್.ಕೆ.ರಾಜು, ಕಾನ್ಸ್ಟೇಬಲ್ ಗಳಾದ ಸತೀಶ್ ಬಗಲಿ, ತಿಮ್ಮಪ್ಪ ಪೂಜಾರ ಎಂಬುವವರನ್ನು ಅಮಾನತು ಮಾಡಲಾಗಿದೆ. ಅಮಾನತು ಮಾಡಿ ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಜಗಲಾಸರ್ ಆದೇಶ ಹೊರಡಿಸಿದ್ದಾರೆ.
ಕದಿರೇನಹಳ್ಳಿಯ ಇಬ್ಬರ ವಿರುದ್ಧ ಸುಳ್ಳು ಎನ್ ಡಿಪಿಎಸ್ ಕೇಸ್ ದಾಖಲಿಸಿ ಇವರು ಜೈಲಿಗೆ ಅಟ್ಟಿದ್ದರು ಎನ್ನಲಾಗಿದೆ. ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಅಫೀಮು ಮಾರುತ್ತಿದ್ದಾರೆಂದು ಕದಿರೇನಹಳ್ಳಿಯ ಇಬ್ಬರ ವಿರುದ್ಧ ಸುಳ್ಳು ಕೇಸ್ ದಾಖಲಿಸಿ ಜೈಲಿ ಕಳುಹಿಸಲಾಗಿತ್ತು.
ಹೀಗಾಗಿ ಜೈಲಿಗೆ ಹೋಗಿದ್ದವರ ಸಂಬಂಧಿಕರು ಆಯುಕ್ತರಿಗೆ ದೂರು ನೀಡಿದ್ದರು. ತನಿಖೆ ನಡೆಸಿದ ಮೇಲೆ ಸುಳ್ಳು ಕೇಸ್ ದಾಖಲಿಸಿದ್ದು, ಬಯಲಿಗೆ ಬಂದಿತ್ತು. ಸದ್ಯ ಪೊಲೀಸರನ್ನು ಸಸ್ಪೆಂಡ್ ಮಾಡಲಾಗಿದ್ದು, ತಪ್ಪು ಮಾಹಿತಿ ನೀಡಿದ್ದ ಇಬ್ಬರನ್ನು ಜೈಲಿಗೆ ಕಳುಹಿಸಲಾಗಿದೆ.