ತಿರುಪ್ಪೂರು: ಮೊಬೈಲ್ ಫೋನ್ ಅತಿಯಾಗಿ ಬಳಸಬೇಡ ಎಂದು ಪೋಷಕರು ಬೈದಿದ್ದಕ್ಕೆ 13 ವರ್ಷದ ಬಾಲಕನೋರ್ವ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟಮೆ ತಮಿಳುನಾಡಿನ ತಿರುಪ್ಪೂರಿನಲ್ಲಿ ನಡೆದಿದೆ.
ಮೃತ ಬಾಲಕನನ್ನು ತಿರುಪ್ಪೂರು ನಿವಾಸಿಯಾಗಿರುವ ಸಿದ್ದಾರ್ಥ್ (13) ಎಂದು ಗುರುತಿಸಲಾಗಿದೆ. ಸಿದ್ದಾರ್ಥ್ ಇತ್ತೀಚೆಗೆ ಮೊಬೈಲ್ ಫೋನ್ನ ಅತಿಯಾದ ಬಳಕೆಗೆ ದಾಸನಾಗಿದ್ದ ಎಂದು ತಿಳಿದುಬಂದಿದೆ. ಅವನು ನಿರಂತರವಾಗಿ ಫೋನ್ನಲ್ಲಿ ಆಟಗಳನ್ನು ಆಡುತ್ತಾ ಕಾಲ ಕಳೆಯುತ್ತಿದ್ದ. ಅವನ ಈ ಅತಿಯಾದ ಚಟ ಪೋಷಕರಿಗೆ ಕಳವಳಕಾರಿಯಾಗಿ ಪರಿಣಮಿಸಿತ್ತು. ಪ್ರತಿದಿನವೂ ಪೋಷಕರು ಸಿದ್ದಾರ್ಥ್ಗೆ ಮೊಬೈಲ್ ಬಳಕೆ ಕಡಿಮೆ ಮಾಡುವಂತೆ ಬುದ್ಧಿ ಹೇಳುತ್ತಿದ್ದರು.
ಘಟನೆ ನಡೆದ ದಿನವೂ ಸಹ, ಸಿದ್ದಾರ್ಥ್ ಮೊಬೈಲ್ನಲ್ಲಿ ಆಟವಾಡುವುದರಲ್ಲಿ ತಲ್ಲೀನನಾಗಿದ್ದಾಗ, ಅವನ ಪೋಷಕರು ಅತಿಯಾದ ಫೋನ್ ಬಳಕೆಗಾಗಿ ಅವನಿಗೆ ಗದರಿದ್ದಾರೆ. ಪೋಷಕರ ಬೈಗುಳದಿಂದ ನೊಂದ ಸಿದ್ದಾರ್ಥ್, ತಕ್ಷಣವೇ ಮನೆಯಲ್ಲಿದ್ದ ಕ್ರಿಮಿನಾಶಕವನ್ನು ಸೇವಿಸಿ ಕುಸಿದು ಬಿದ್ದಿದ್ದಾನೆ.
ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ವಿಫಲ:
ಮಗ ಕುಸಿದು ಬಿದ್ದಿರುವುದನ್ನು ಕಂಡ ಪೋಷಕರು ತೀವ್ರ ಆಘಾತಕ್ಕೊಳಗಾಗಿ, ತಕ್ಷಣವೇ ಸಿದ್ದಾರ್ಥ್ ನನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಆಸ್ಪತ್ರೆಗೆ ತಲುಪುವಷ್ಟರಲ್ಲಿ ಬಾಲಕ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ. ಈ ಸುದ್ದಿ ಪೋಷಕರಿಗೆ ತೀವ್ರ ಆಘಾತವನ್ನುಂಟು ಮಾಡಿದೆ.
ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ, ಸಿದ್ದಾರ್ಥ್ ಯಾವುದೇ ನಿರ್ದಿಷ್ಟ ಅಪ್ಲಿಕೇಶನ್ಗೆ ವ್ಯಸನಿಯಾಗಿರಲಿಲ್ಲ, ಬದಲಿಗೆ ಮೊಬೈಲ್ನಲ್ಲಿ ಅತಿಯಾಗಿ ಆಟಗಳನ್ನು ಆಡುತ್ತಿದ್ದ ಎಂಬುದು ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.